ಯಳಂದೂರು: ಇಂದು ನಾವು ಓದುತ್ತಿರುವ ಕಲಿಯುತ್ತಿರುವ ವಚನಗಳನ್ನು ೧೨ ಶತಮಾನದಲ್ಲಿ ಸಂರಕ್ಷಿಸಿ ಜೋಪಿಟ್ಟಿ ವಚನಕಾರರಲ್ಲಿ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದು ಇವರು ವಚನಗಳ ಸಂರಕ್ಷಕರಾಗಿದ್ದಾರೆ ಎಂದು ಶಿಕ್ಷಕ ವೈ.ಸಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಅವರು ಬುಧವಾರ ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂಭಾಗ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ೧೨ ನೇ ಶತಮಾನದಲ್ಲಿ ಬಸವಣ್ಣನವರಿಂದ ಹಿರಿಯರಾಗಿದ್ದ ಮಾಚಿದೇವರು ತಂದೆ ಎಂದು ಕರೆಯಿಸಿಕೊಂಡವರು. ಆಜಾನುಬಾಹುವಾಗಿದ್ದ ಇವರು ತಮ್ಮ ಕಾಯಕದೊಂದಿಗೆ ವಚಗಳನ್ನು ರಚಿಸಿ ಇದರ ಮೂಲಕ ಬದುಕಿನ ಸಾರವನ್ನು ಹೇಳಿದ ಮಹಾನ್ ವಚನಕಾರರಾಗಿದ್ದಾರೆ. ೩೫೦ ಕ್ಕೂ ಹೆಚ್ಚು ವಚನಗಳನ್ನು ಇವರು ರಚಿಸಿದ್ದರು.
ಕಲ್ಯಾಣದಲ್ಲಿ ಬಸವಣ್ಣನವರು ಐಕ್ಯವಾದ ನಂತರ ಇಲ್ಲಿ ವಚನಕಾರರ ಮೇಲೆ ಹಲ್ಲೆಗಳು ನಡೆದವು. ಸಾವಿರಾರು ವಚನಗಳನ್ನು ರಸ್ತೆಯಲ್ಲಿ ಸುಡಲಾಯಿತು. ಈ ಸಂದರ್ಭದಲ್ಲಿ ಬಿಜ್ಜಳನೂ ಶ್ರೀಶೈಲಕ್ಕೆ ತೆರಳಲು ಸಿದ್ದನಾದ ನಂತರ ಮಾಚಿದೇವರಿಗೆ ವಚನಗಳನ್ನು ಜೋಪಾನ ಮಾಡುವಂತೆ, ಇದನ್ನು ರಕ್ಷಿಸುವಂತೆ ಮನವಿ ಮಾಡುತ್ತಾರೆ. ಆ ಸಂದರ್ಭದಲ್ಲಿ ಅಕ್ಕನಾಗಮ್ಮರ ಜೊತೆಗೂಡಿ ಇದನ್ನು ರಕ್ಷಿಸಿದ ಮಹಾನ್ ವ್ಯಕ್ತಿ ಇವರಾಗಿದ್ದು ಇಂದು ನೂರಾರು ವಚನಕಾರರ ಸಾವಿರಾರು ವಚನಗಳು ಇಂದು ನಮ್ಮದಾಗಿವೆ ಇವರು ಪ್ರಾತಃಸ್ಮರಣೀಯರಾಗಿದ್ದಾರೆ ಎಂದರು.
ಚಾಮರಾಜನಗರ ವೀರ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ದುಂಡುಮಹದೇವ ಮಾತನಾಡಿ, ರಾಜ್ಯದಲ್ಲಿ ನಮ್ಮ ಜನಾಂಗದ ಸಂಖ್ಯೆ ಕಡಿಮೆ ಇದೆ. ನಮ್ಮ ಮಕ್ಕಳಿಗೆ ನಾವು ನಮ್ಮ ವೃತ್ತಿಯನ್ನೇ ಮುಂದುವರೆಸಲು ಒತ್ತಡ ಹೇರಬಾರದು, ಇವರಿಗೆ ಶಿಕ್ಷಣವನ್ನು ನೀಡಬೇಕು, ಉನ್ನತ ಅಧಿಕಾರಿಗಳಾಗಿ ಮಾಡಬೇಕು, ರಾಜಕೀಯದಲ್ಲಿ ನಮ್ಮ ಸ್ಥಾನವನ್ನು ಬಲಗೊಳಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಶಿಕ್ಷಣ, ಸಂಘಟನೆ, ಹೋರಾಟದ ಹಾದಿ ನಮ್ಮದಾಗಬೇಕು, ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ನಾಮನಿರ್ದೇಶಿತ ಸದಸ್ಯರಾದ ನಮ್ಮ ಸಮುದಾಯದ ವ್ಯಕ್ತಿಗೆ ಸ್ಥಾನ ನೀಡಬೇಕು, ಸಮುದಾಯ ನಿರ್ಮಿಸಿಕೊಳ್ಳಲು ಸ್ಥಳವನ್ನು ನೀಡಬೇಕು ಎಂದು ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ಸಿದ್ಧರಾಜು ತಹಶೀಲ್ದಾರ್ ಜಯಪ್ರಕಾಶ್ ಮಾತನಾಡಿದರು, ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಂಜು, ಬಿ. ರವಿ, ಲಕ್ಷ್ಮಿಮಲ್ಲು, ಸುಶೀಲಾಪ್ರಕಾಶ್ ಮುಖಂಡರಾದ ಸಂಕಲ್ಪನಾಗರಾಜು, ಶೇಖರ್, ಪುಟ್ಟಸ್ವಾಮಿ, ಮಹದೇವಶೆಟ್ಟಿ, ರಂಗಸ್ವಾಮಿ, ಬಸವರಾಜು, ಚಂದ್ರು, ಶ್ರೀನಿವಾಸ್, ನಿಂಗರಾಜು,ನಿಂಗಶೆಟ್ಟಿ ಸೇರಿದಂತೆ ಅನೇಕರು ಇದ್ದರು.