ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಭಾರೀ ಬದಲಾವಣೆ ಸಂಭವಿಸಬಹುದು ಎಂಬ ಅಚ್ಚರಿ ಹೇಳಿಕೆಯನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಗಾಳಿ ತಣ್ಣಗೆ ಬೀಸುತ್ತಿದೆ, ಸೆಪ್ಟೆಂಬರ್ ಕಳೀಲಿ,” ಎಂದು ಸಂಚಲನಕಾರಿ ಕಾಮೆಂಟ್ ಮಾಡಿದ್ದಾರೆ.
2013ರಲ್ಲಿ ಇದ್ದಂತೆಯೇ ಈ ಬಾರಿ ಸಿಎಂ ಸಿದ್ದರಾಮಯ್ಯನವರ ಸ್ಥಿತಿ ಅಲ್ಲ ಎಂದು ಕೆಲ ಶಾಸಕರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಈಗ ಪವರ್ ಸೆಂಟರ್ಗಳು ತುಂಬಾ ಆಗಿವೆ, ಆಗ ಒಂದು ಪವರ್ ಸೆಂಟರ್ ಮಾತ್ರ ಇತ್ತು. ಈಗ ಒತ್ತಡ ಹೆಚ್ಚು,” ಎಂದರು.
ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂಬ ಆರೋಪದ ಬಗ್ಗೆ ಅವರು, “ಸಿಎಂ ರಾಜ್ಯದಾದ್ಯಂತ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡುತ್ತಿದ್ದಾರೆ. ಹಣವಿಲ್ಲದೆ ಇದ್ದರೆ ಅನುದಾನ ನೀಡಲು ಸಾಧ್ಯವೇ? ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಸರ್ಕಾರದ ಮೇಲಿದೆ,” ಎಂದು ಹೇಳಿದರು.
ಆದಾಗ್ಯೂ, ಎಲ್ಲಾ ಕ್ಷೇತ್ರಗಳಿಗೆ ಸಮಾನವಾಗಿ ಅನುದಾನ ಒದಗಿಸಲಾಗುತ್ತಿದೆ. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬ ಭೇದವಿಲ್ಲದೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.