ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ಮಂಗಳೂರಲ್ಲಿ ನಡೆದಿದೆ. ಸಕ್ರಪ್ಪ ನಿಂಗಪ್ಪ ವಾಲೀಕಾರ್, ನಾಪತ್ತೆಯಾದ ವ್ಯಕ್ತಿ. ಇವರು ಮಂಗಳೂರಿನ ಉರ್ವಸ್ಟೋರ್ ನ ಸುಂಕದಕಟ್ಟೆಯ ಸತೀಶ್ ಎಂಬುವರ ಬಾಡಿಗೆ ಮನೆಯಲ್ಲಿ ಆತನ ಸ್ನೇಹಿತರಾದ ತೀರ್ಥಪ್ಪ ಕೋರಿ, ಬಸಪ್ಪ ಕೋರಿ, ಮತ್ತು ಪುಂಡಲೀಕ ಕೋರಿ ರವರ ಜೊತೆ ವಾಸ ಮಾಡಿಕೊಂಡು ಕೂಲಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ 17-02-2026 ರಂದು ಸಂಜೆ ಸಮಯ 5.45 ರ ವೇಳೆಗೆ ದೂರುದಾರರ ಜೊತೆಗೆ ಮೊಬೈಲಲ್ಲಿ ಮಾತನಾಡಿದ್ದರು. ನಂತರ ಅದೇ ದಿನ ದೂರುದಾರರು ರಾತ್ರಿ 8ರ ಸುಮಾರಿಗೆ ಪೋನ್ ಕರೆ ಮಾಡಿದಾಗ ಪೋನ್ ಸ್ವೀಚ್ ಆಫ್ ಎಂದು ಬಂದಿದೆ. ಸಕ್ರಪ್ಪ ನಿಂಗಪ್ಪ ವಾಲೀಕಾರ್ ರವರು ಯಾವುದೇ ಸಂಪರ್ಕಕ್ಕೆ ಸಿಗದೇ ಇದ್ದಾಗ ಪಿರ್ಯಾದಿದಾರರು ಆತನ ಜೊತೆ ವಾಸವಿದ್ದ ಸ್ನೇಹಿತರಲ್ಲಿ ವಿಚಾರಿಸಿದಾಗ ಅವರು ಆತನು 2 ದಿನಗಳ ಕಾಲ ರಾತ್ರಿ ಕೆಲಸವಿರುವುದಾಗಿ ಹೇಳಿ ಹೋಗಿರುವುದಾಗಿ ತಿಳಿಸಿದ್ದು, ಬಳಿಕ ಪಿರ್ಯಾದಿದಾರರು ಸಂಬಂಧಿಕರಲ್ಲಿ ತನ್ನ ಅಣ್ಣನ ಪತ್ತೆ ಬಗ್ಗೆ ವಿಚಾರಿಸಿಲಾಗಿ ಯಾವುದೇ ಮಾಹಿತಿ ಸಿಗದೇ ಇದ್ದಾಗ ಸಕ್ರಪ್ಪ ನಿಂಗಪ್ಪ ವಾಲೀಕಾರ್ ಕಾಣೆಯಾಗಿರುವುದಾಗಿ ಪೊಲೀಸ್ ದೂರು ನೀಡಲಾಗಿದೆ.



