ಮಂಡ್ಯ: ಮಂಡ್ಯ ಮೈತ್ರಿ ಅಭ್ಯರ್ಥಿ ಕುಮಾರಣ್ಣನೇ ಎಂದು ಪಾಂಡವಪುರದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.
ನಾನೇ ಚುನಾವಣೆಯ ನೇತೃತ್ವ ವಹಿಸುತ್ತೇನೆ. ಅತ್ಯಂತ ಪ್ರಚಂಡ ಬಹುಮತದಲ್ಲಿ ಕುಮಾರಣ್ಣನ್ನ ಗೆಲ್ಲಿಸುತ್ತೇವೆ. ಕುಮಾರಣ್ಣ ನಾಮಪತ್ರ ಸಲ್ಲಿಸಲು ಅಷ್ಟೇ ಬರಲಿ ಅಂತಾ ಹೇಳಿದ್ದೇವೆ. ನಾವೇ ಓಡಾಡಿ ಕುಮಾರಣ್ಣನ್ನ ಗೆಲ್ಲಿಸುತ್ತೇವೆ. ದೇವೇಗೌಡರ ಆಶೀರ್ವಾದ, ನರೇಂದ್ರ ಮೋದಿ ಅವರ ಸಹಕಾರದಿಂದ ಗೆಲ್ಲಿಸುತ್ತೇವೆ. ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅವರೇ ಹೇಳ್ತಾರೆ ಎಂದರು.
ಬಿಜೆಪಿ ಹೈಕಮಾಂಡ್ ಸಹ ಸಹಕಾರ ನೀಡಿದೆ. ನಾವೆಲ್ಲಾ ಒಮ್ಮತದಿಂದ ಮಂಡ್ಯ, ಹಾಸನ, ಕೋಲಾರದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಮೈತ್ರಿಯಲ್ಲಿರುವ ಸಣ್ಣ ಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ. ನಾಳೆ ಬಿಜೆಪಿ ಹೈಕಮಾಂಡ್ ಜೆಡಿಎಸ್ ಗೆ ಯಾವ ಕ್ಷೇತ್ರಗಳು ಎಂದು ಅಧಿಕೃತವಾಗಿ ಹೇಳುತ್ತೆ. ಟಿಕೆಟ್ ಘೋಷಣೆ ಬಳಿಕ ಸುಮಲತಾ ಅವರೊಂದಿಗೂ ಮಾತನಾಡುತ್ತೇವೆ. ಅವರು ಹೇಗೆ ನಡೆದುಕೊಳ್ಳಬೇಕು, ನಾವು ಹೇಗೆ ನಡೆದುಕೊಳ್ಳಬೇಕು ಎಂದು ರಾಷ್ಟ್ರ ನಾಯಕರು ಹೇಳ್ತಾರೆ ಎಂದು ತಿಳಿಸಿದರು.
ಸುಮಲತಾ ಅವರು ಇಂದಿಗೂ ಲೋಕಸಭಾ ಸದಸ್ಯರು. ಹಿಂದೆ ರಾಜಕೀಯವಾಗಿ ನಮ್ಮ ಅವರ ಮಧ್ಯೆ ಸಣ್ಣ ಪುಟ್ಟ ವ್ಯತ್ಯಾಸ ಆಗಿತ್ತು. ಅದೆಲ್ಲವನ್ನು ಸರಿ ಪಡಿಸಿಕೊಳ್ಳುತ್ತೇವೆ. ರಾಜಕೀಯದಲ್ಲಿ ಯಾರು ಶತ್ರುವು ಅಲ್ಲ, ಮಿತ್ರರೂ ಅಲ್ಲ. ಎಲ್ಲರೂ ಒಗ್ಗಟ್ಟನಿಂದ ಹೋಗುತ್ತೇವೆ. ಕುಮಾರಸ್ವಾಮಿ ಅವರೇ ಮಂಡ್ಯಗೆ ಬರಬೇಕೆಂಬ ನಿರ್ಣಯವನ್ನು ನಾವು ಮಾಡಿದ್ದೆವು. ಮಂಡ್ಯ ಅಂದ್ರೆ ಇಂಡಿಯಾ ಎಂಬ ದಿಕ್ಸೂಚಿ ಇದೆ. ಅದಕ್ಕೆ ಹೊಸ ನಾಂದಿ ಹಾಡಲು ನಾವು ಕುಮಾರಣ್ಣನ ತರುತ್ತಾ ಇದ್ದೀವಿ. ಕುಮಾರಣ್ಣ ನಮ್ಮ ಕಾರ್ಯಕರ್ತರ ನಮ್ಮ ಆಸೆ ನಿರಾಸೆ ಮಾಡಬಾರದು ಎಂದು ಸ್ಪರ್ಧೆ ಮಾಡ್ತಾ ಇದ್ದಾರೆ. ಕುಮಾರಣ್ಣನ ಮತ್ತೊಮ್ಮೆ ನಾವು ಎಂಪಿಯಾಗಿ ಮಾಡ್ತೀವಿ ಎಂದು ಹೇಳಿದರು.