ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 01-05-2025ರಂದು ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಇದೀಗ ಮತ್ತೊಬ್ಬ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಬ್ದುಲ್ ರಜಾಕ್ (59) ಎಂದು ಗುರುತಿಸಲಾಗಿದ್ದು, ಈತನು ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ತನ್ನ ಮಗ ಮೊಹಮ್ಮದ್ ಮುಜಾಮ್ಮಿಲ್ ಮತ್ತು ಮಗಳ ಗಂಡ ನೌಷದ್ ವಾಮಂಜೂರು @ ಚೊಟ್ಟೆ ನೌಷದ್ ಸೇರಿದಂತೆ ಇತರರ ಜೊತೆ ಸೇರಿ ತನ್ನ ಮನೆಯಲ್ಲಿ ಕೊಲೆಗೆ ಸಂಚು ರೂಪಿಸಲು ಸಹಾಯ ಮಾಡಿದ್ದಾನೆ.
ಅಲ್ಲದೇ, ಪ್ರಕರಣದ ಪ್ರಮುಖ ಆರೋಪಿಗಳು ತಲೆ ಮರೆಸಿಕೊಳ್ಳಲು ಈತನು ನಿರಂತರ ಸಹಕಾರ ನೀಡಿದ್ದಾನೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಕೃತ್ಯದಿಂದ ಸುಹಾಸ್ ಶೆಟ್ಟಿಯ ಕೊಲೆಗೆ ನೇರವಾಗಿ ಅನಾಯಾಸ ಸಹಾಯ ಮಾಡಿದ ಅಪರಾಧಕ್ಕೆ ಅಬ್ದುಲ್ ರಜಾಕ್ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿಸಲಾಗಿದೆ.