ಬೆಂಗಳೂರು: ಮಾರುಕಟ್ಟೆಯಲ್ಲಿ ಮಾವಿನಹಣ್ಣಿನ ಬೆಲೆ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ತಕ್ಷಣ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಲು ಆಗ್ರಹಿಸಿದ್ದಾರೆ. ಅವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ತುರ್ತು ಪತ್ರ ಬರೆದು, ನೆಫೆಡ್ ಮತ್ತು ಎನ್ಸಿಸಿಎಫ್ ಮುಖಾಂತರ ಖರೀದಿ ಆರಂಭಿಸಲು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, 8-10 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆಯಿದೆ. ಬೆಲೆ ಪ್ರತಿ ಕ್ವಿಂಟಾಲಿಗೆ ರೂ.12,000 ರಿಂದ ರೂ.3,000ಕ್ಕೆ ಕುಸಿತವಾಗಿದೆ.
ಮಾವು ಉತ್ಪಾದನೆಗೆ ಪ್ರತಿ ಕ್ವಿಂಟಾಲಿಗೆ ರೂ.5,460 ವೆಚ್ಚವಾಗುತ್ತಿದೆ ಎಂಬುದು ಕೃಷಿ ಮೌಲ್ಯ ಆಯೋಗದ ವರದಿ. ಈ ಅಜಗಜಾಂತರ ವ್ಯತ್ಯಾಸದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಕೇಂದ್ರದ ಸಕಾಲಿಕ ಕ್ರಮ ಗ್ರಾಮೀಣ ಅಸ್ಥಿರತೆಯನ್ನು ತಡೆಯಲು ನೆರವಾಗುತ್ತದೆ ಎಂದು ಸಿಎಂ ಹೇಳಿದರು.