ಬೆಂಗಳೂರು : ಬೆಂಗಳೂರು ಮೆಟ್ರೋ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಸಂಸದ ತೇಜಸ್ವಿ ಸೂರ್ಯಗೆ ಪೊಲೀಸ್ ನೋಟಿಸ್ ನೀಡಲಾಗಿದೆ. ಬೆಂಗಳೂರು ಮೆಟ್ರೋ ದರ ಏರಿಕೆಯನ್ನು ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಆರ್ವಿ ರೋಡ್ ನಿಲ್ದಾಣದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಪ್ರಯಾಣಿಕರ ಸಂಕಷ್ಟಗಳನ್ನು ಆಲಿಸಿದ ಅವರು, ದರ ಏರಿಕೆ ಮುಂದುವರೆಸಿದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ವಿಶೇಷವೆಂದರೆ, ಇಬ್ಬರೂ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ ಬರುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದ್ದು, ಸಂಸದರು ಧರಿಸಿದ್ದ ಟೀ ಶರ್ಟ್ ಮೇಲೆ ‘Mr. CM cut the dram'(ಮುಖ್ಯಮಂತ್ರಿಗಳೇ ನಾಟಕ ನಿಲ್ಲಿಸಿ) ಎಂಬ ಬರಹ ಹಾಗೂ #farehikebeda ಎಂಬ ಹ್ಯಾಶ್ಟ್ಯಾಗ್ ಗಮನ ಸೆಳೆಯಿತು.
ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ತೇಜಸ್ವಿ ಸೂರ್ಯ, ದರ ಏರಿಕೆಯಿಂದ ಜನರಿಗಾಗುತ್ತಿರುವ ತೊಂದರೆಗಳನ್ನು ಆಲಿಸಿದರು. ಈ ವೇಳೆ ಯುವತಿಯೊಬ್ಬಳು ತನ್ನ ಅಳಲು ತೋಡಿಕೊಳ್ಳುತ್ತಾ, ‘ಸರ್, ಮನೆಯಿಂದ ಇಲ್ಲಿಗೆ ಬರಲು ಬಸ್ ರಶ್ ಇರುತ್ತೆ. ಆಟೋಗೆ ಹತ್ತಿರ 50 ರೂ. ಕೊಡಬೇಕು. ಮೆಟ್ರೋಗೆ ದಿನಕ್ಕೆ 200 ರೂ. ದಾಟುತ್ತಿದೆ. ದಿನಕ್ಕೆ 250 ರೂ. ಕೇವಲ ಪ್ರಯಾಣಕ್ಕೆ ಹೋದರೆ ಬದುಕುವುದು ಹೇಗೆ? ಎಂದು ಪ್ರಶ್ನಿಸಿದರು.
ಇದೇ ವೇಳೆ ಗಾರ್ಮೆಂಟ್ಸ್ ಕೆಲಸಗಾರರು ಹಾಗೂ ವಿದ್ಯಾರ್ಥಿಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದರು. ಇದೀಗ ಇದೇ ವಿಚಾರವಾಗಿ ಪ್ರತಿಭಟನೆ ನಡೆಸಿದ್ದ ಸಂಸದ ತೇಜಸ್ವಿ ಸೂರ್ಯಗೆ ಪೊಲೀಸ್ ನೋಟಿಸ್ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ವಿವಿಧ ಸಂಘಟನೆಗಳು, ವ್ಯಕ್ತಿಗಳು, ರಾಜಕೀಯ ಪಕ್ಷಗಳು, ನಡೆಸುವ ಮೆರವಣಿಗೆ ಧರಣಿಗಳಿಂದ ಸಾರ್ವಜನಿಕ ಆಗುತ್ತಿರುವ ದಿನ ನಿತ್ಯದ ತೊಂದರೆಗಳ ಬಗ್ಗೆ ತೀವ್ರತರವಾದ ಆಕ್ಷೇಪಣೆ ವ್ಯಕ್ತಪಡಿಸಿ ಇನ್ನು ಮುಂದೆ ಬೆಂಗಳೂರು ನಗರದಲ್ಲಿ ಫ್ರೀಡಂ ಪಾರ್ಕ್ ಅನ್ನು ಹೊರತುಪಡಿಸಿ ಯಾವುದೇ ಮೆರವಣಿಗೆ ನಡೆಸಲು ಅವಕಾಶ/ಅನುಮತಿ ನೀಡಬಾರದೆಂದು, ಇದನ್ನು ಉಲ್ಲಂಸಿ ಮೆರವಣಿಗೆ/ಧರಣಿಗಳು ನಡೆಸಿದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲು ಘನ ಸರ್ಕಾರಕ್ಕೆ ಸೂಚಿಸಿ ಆದೇಶ ಹೊರಡಿಸಿರುತ್ತದೆ. ಆದ ಕಾರಣ ನೀವು ನಡೆಸಲು ಉದ್ದೇಶಿಸಿರುವ ಧರಣಿಗೆ ಯಾವುದೇ ರೀತಿಯ ಅನುಮತಿಯನ್ನು ಪೊಲೀಸ್ ಇಲಾಖೆ ವತಿಯಿಂದ ನೀಡಿರುವುದಿಲ್ಲ ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.



