ಬೆಂಗಳೂರು/ಗುಲ್ಬರ್ಗಾ: ಪ್ರಾಚೀನ ಇತಿಹಾಸದ ವಿಚಾರಗಳನ್ನು ಕೆದಕುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿವೃದ್ಧಿಯ ಕುರಿತು ಜನರ ಗಮನ ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರು ಗುಜರಾತ್ನ ಸೋಮನಾಥ ಸ್ವಾಭಿಮಾನ ಪರ್ವ್ ಕಾರ್ಯಕ್ರಮದಲ್ಲಿ ಸೋಮನಾಥ ದೇವಸ್ಥಾನದ ಪುನರ್ ನಿರ್ಮಾಣದ ಇತಿಹಾಸವನ್ನು ಉಲ್ಲೇಖಿಸಿ ಮಾತನಾಡಿದ್ದರು. ಮೋದಿಯವರ ಈ ಹೇಳಿಕೆ ವಿರುದ್ಧ ಪ್ರಿಯಾಂಕ್ ಖರ್ಗೆಯವರು ಕಿಡಿಕಾರಿದ್ದು, ಮೋದಿಯವರ ಈ ಭಾಷಣ ಸರ್ಕಾರದ 11 ವರ್ಷದ ಕಾರ್ಯಕ್ಷಮತೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನವಾಗಿದೆ ಎಂದು ಟೀಕಿಸಿದ್ದಾರೆ.
ಅಲ್ಲದೆ ಪ್ರಧಾನಿಯಿಂದ ನಮಗೆ ಬೇಕಿರುವುದು ಏನು? ಇತಿಹಾಸ ಪಾಠಗಳೇ? ದೇಶದ ಭವಿಷ್ಯದ ಬ್ಲೂಪ್ರಿಂಟ್ ಎಲ್ಲಿದೆ? 11 ವರ್ಷಗಳಿಂದ ಘೋಷಣೆಗಳೇ ಹೊರತು ಫಲಿತಾಂಶವೇ ಇಲ್ಲ. ‘ಮೇಕ್ ಇನ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ಎಲ್ಲವೂ ವಿಫಲವಾಗಿದೆ ಎಂದು ಆರೋಪಿಸಿದರು.
ಜನರಿಗೆ ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ. ಸರ್ಕಾರವನ್ನು ಟೀಕಿಸುವವರನ್ನೆಲ್ಲಾ ರಾಷ್ಟ್ರ ವಿರೋಧಿ ಎಂದು ಮುದ್ರೆ ಹೊಡೆಯುವ ಪ್ರವೃತ್ತಿ ಸರಿಯಲ್ಲ ಎಂದು ಕಿಡಿಕಾರಿದ್ದು, ಇದೇ ವೇಳೆ ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ
ಈ ವೇಳೆ ಕೇರಳದಲ್ಲಿ ಬಿಜೆಪಿಯ 2026ರ ಚುನಾವಣಾ ಅಭಿಯಾನಕ್ಕೆ ಚಾಲನೆ ನೀಡಿದ ಅಮಿತ್ ಶಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಆಡಳಿತದ ಬಗ್ಗೆ ಕರ್ನಾಟಕಕ್ಕೆ ಉಪದೇಶ ನೀಡುವ ಹಕ್ಕು ಕೇಂದ್ರಕ್ಕೆ ಇಲ್ಲ ಎಂದಿದ್ದಾರೆ.
ಇನ್ನೂ ಜಿಎಸ್ಟಿ ಹಾಗೂ ಐಟಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಪ್ರಮುಖ ಕೊಡುಗೆ ನೀಡುತ್ತಿರುವ ರಾಜ್ಯವಾಗಿದ್ದು, ಅರ್ಹ ಹಂಚಿಕೆಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ್ದು, ಕೇಂದ್ರದಿಂದ ಸಮರ್ಪಕ ನೆರವು ಇಲ್ಲದೆ ರಾಜ್ಯವೇ ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತಿದೆ ಎಂದು ಹೇಳಿದರು.



