ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರದಿಂದ ಜನಜೀವನ ಭಾರೀ ಅಸ್ತವ್ಯಸ್ತಗೊಂಡಿದ್ದು, ಹವಾಮಾನ ಇಲಾಖೆ ಜುಲೈ 3ರವರೆಗೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಳಗಾವಿ, ಬೀದರ್ ಹಾಗೂ ಕಲಬುರಗಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ರಾಜ್ಯದ ಇತರ ಜಿಲ್ಲೆಗಳಲ್ಲಿ ಸಹ ಸಾಧಾರಣ ಮಳೆಯ ಸಾಧ್ಯತೆವಿದ್ದು, ಬಿಸಿಲು ಹಾಗೂ ಮಳೆ ಮಿಶ್ರಿತ ವಾತಾವರಣ ಮುಂದುವರಿಯಲಿದೆ. ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಕೆಆರ್ಎಸ್ ಜಲಾಶಯ 84 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಂಪೂರ್ಣ ಭರ್ತಿಯಾಗಿ, 50,000 ಕ್ಯೂಸೆಕ್ಸ್ ನೀರನ್ನು ಬಿಡಲಾಗಿದೆ.
ಕಬಿನಿ, ಹಾರಂಗಿ, ಹೇಮಾವತಿ ಹಾಗೂ ತುಂಗಾಭದ್ರ ನದಿಗಳೂ ತುಂಬಿ ಹರಿಯುತ್ತಿವೆ. ಇದರಿಂದಾಗಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಶೃಂಗೇರಿ, ವಿರಾಜಪೇಟೆ, ಕೊಟ್ಟಿಗೆಹಾರ, ಬನವಾಸಿ, ಕಾರ್ಕಳ, ಮಂಗಳೂರು, ಉಡುಪಿ, ಪುತ್ತೂರು, ಬಂಟ್ವಾಳ, ಗೋಕರ್ಣ, ಧಾರವಾಡ, ಹುಬ್ಬಳ್ಳಿ, ಬೀದರ್, ಕಲಬುರಗಿ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಸಾರ್ವಜನಿಕರು ಅಗತ್ಯ ಎಚ್ಚರಿಕೆ ವಹಿಸಲು ಹಾಗೂ ಸ್ಥಳೀಯ ಆಡಳಿತದ ಸೂಚನೆ ಪಾಲಿಸಲು ಹವಾಮಾನ ಇಲಾಖೆ ವಿನಂತಿಸಿದೆ.