ಬೆಂಗಳೂರು: ಕರ್ನಾಟಕ ಸರ್ಕಾರ ವಸತಿ ಯೋಜನೆಗಳಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು 10%ರಿಂದ 15%ಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ತೀರ್ಮಾನವು ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ವಸತಿ ಯೋಜನೆಗಳಿಗೆ ಅನ್ವಯವಾಗಲಿದೆ. ಮೊದಲೇ ನಿಗದಿಯಾಗಿದ್ದ ಕ್ಯಾಬಿನೆಟ್ನಲ್ಲಿ ಈ ವಿಷಯದ ಪ್ರಸ್ತಾಪ ಇರಲಿಲ್ಲ. ಆದರೆ ಕ್ಯಾಬಿನೆಟ್ ಹೆಚ್ಚುವರಿ ಅಜೆಂಡಾದಲ್ಲಿ ವಿಷಯ ಸೇರ್ಪಡೆ ಮಾಡಿ ಕ್ಯಾಬಿನೆಟ್ ಒಪ್ಪಿಗೆ ಪಡೆಯುವಲ್ಲಿ ವಸತಿ ಸಚಿವ ಜಮೀರ್ ಅಹಮದ್ ಯಶಸ್ವಿಯಾಗಿದ್ದಾರೆ.
ಈ ಮೀಸಲಾತಿ ಬದಲಾವಣೆಗೆ ಹೊಸ ನಿಯಮಗಳು ಅಗತ್ಯವಿಲ್ಲದ ಕಾರಣ, ಸಂಪುಟ ತೀರ್ಮಾನದ ಮೂಲಕಲೇ ಈ ಕ್ರಮ ಜಾರಿಗೆ ಬರಲಿದೆ. ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಈ ತೀರ್ಮಾನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಇದು ಸಾಚಾರ್ ಸಮಿತಿ ವರದಿ ಮತ್ತು ಕೇಂದ್ರದ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ಸಾಮಾಜಿಕ ನ್ಯಾಯದ ಕ್ರಮವಾಗಿದೆ ಎಂದು ಹೇಳಿದರು.
ಈ ಮೀಸಲಾತಿ ಏಕಾಂಗಿಯಾಗಿ ಮುಸ್ಲಿಮರಿಗಷ್ಟೆ ಅಲ್ಲದೆ, ಜೈನರು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರಿಗೆ ಅನ್ವಯವಾಗಲಿದೆ. ಬಡವರ ಮನೆ ಸಮಸ್ಯೆಯನ್ನು ರಾಜಕೀಯ ಕಣ್ಣಿನಿಂದ ನೋಡುವವರ ಅಭಿಪ್ರಾಯಗಳಿಗೆ ಉತ್ತರ ನೀಡಬಾರದು ಎಂದು ಸಚಿವರು ಸ್ಪಷ್ಟಪಡಿಸಿದರು. ಮನೆ ಅಗತ್ಯವಿರುವ ಪ್ರತಿಯೊಬ್ಬ ಅಲ್ಪಸಂಖ್ಯಾತನಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.