ಮೈಸೂರು: ಮೈಸೂರಿನಲ್ಲಿ ನಡೆದ ದಾರೂಣ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಇಲಾಖೆಯು ಕೆಲವೇ ಗಂಟೆಗಳಲ್ಲಿ ಕೊಳ್ಳೇಗಾಲದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ. ಮೈಸೂರಿನ ಸಿದ್ದಲಿಂಗಪುರ ನಿವಾಸಿಯಾಗಿರುವ ಕಾರ್ತಿಕ್ (31) ಬಂಧಿತ ಆರೋಪಿ.
ಘಟನೆ ಹಿನ್ನೆಲೆ: ಇತ್ತೀಚೆಗೆ ಮೈಸೂರಿನಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯದಾದ್ಯಂತ ಆತಂಕವನ್ನುಂಟು ಮಾಡಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಯನ್ನು ಕಿರುಕುಳ ನೀಡಿ, ನಂತರ ದಾರುಣವಾಗಿ ಕೊಲೆಗೈದಿರುವ ಪ್ರಕರಣದಲ್ಲಿ ಪೊಲೀಸರು ಶೀಘ್ರ ಕ್ರಮ ಕೈಗೊಂಡಿದ್ದರು.
ಬಂಧಿತ ಕಾರ್ತಿಕ್ ಈಗಾಗಲೇ ಮಂಡ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬಂಧಿತನಾಗಿದ್ದು, ಎರಡು ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದನು. ಕೇವಲ ನಾಲ್ಕು ತಿಂಗಳು ಹಿಂದೆ ಜೈಲಿನಿಂದ ಬಿಡುಗಡೆಯಾದ ಈ ಆರೋಪಿ, ತಮ್ಮ ಪಾಠ ಕಲಿಯದೇ ಮತ್ತೆ ಇನ್ನೊಂದು ಗಂಭೀರ ಅಪರಾಧದಲ್ಲಿ ತೊಡಗಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಅಪರಾಧದ ನಂತರ ಕಾರ್ತಿಕ್ ಮೈಸೂರಿನ ಖಾಸಗಿ ಬಸ್ ನಿಲ್ದಾಣದಿಂದ ಕೊಳ್ಳೇಗಾಲದತ್ತ ಪ್ರಯಾಣಿಸಿದ್ದನು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿ ಹತ್ತಿ ಹೋದ ಬಸ್ ಹಾಗೂ ರಸ್ತೆ ಮಾರ್ಗವನ್ನು ಗುರುತಿಸಿದರು. ಬಳಿಕ ತಕ್ಷಣ ಕಾರ್ಯಚರಣೆ ನಡೆಸಿದ ಪೊಲೀಸರು ಕೊಳ್ಳೇಗಾಲದಲ್ಲಿ ಕಾರ್ತಿಕ್ನನ್ನು ಬಂಧಿಸಲು ಯಶಸ್ವಿಯಾದರು.
ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯಂತೆ, ಕಾರ್ತಿಕ್ ಮಧ್ಯಪಾನಕ್ಕೆ ಆಸಕ್ತ, ನಿರುದ್ಯೋಗಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಅಲೆಯುತ್ತಿದ್ದ. ಈತನ ಬದುಕು ಅಪರಾಧಮಯ ಮತ್ತು ಅಸಭ್ಯ ಚಟುವಟಿಕೆಯಿಂದ ಕೂಡಿತ್ತು ಎನ್ನಲಾಗುತ್ತಿದೆ. ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ತನಿಖೆಗೆ ಮಹತ್ವದ ಸಾಕ್ಷಿಯಾಗಿ ಕೆಲಸ ಮಾಡಿವೆ.
ಪೊಲೀಸ್ ಕ್ರಮ ಮತ್ತು ಮುಂದಿನ ತನಿಖೆ: ಕಾರ್ತಿಕ್ ಬಂಧನದ ನಂತರ ಮೈಸೂರು ನಗರ ಪೊಲೀಸರು ಆತನನ್ನು ಮೈಸೂರಿಗೆ ಕರೆತರುತ್ತಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆಯಿದೆ. ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಗುವಂತೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ.