Wednesday, June 4, 2025
Google search engine

Homeರಾಜ್ಯಸುದ್ದಿಜಾಲಆಧುನಿಕ ಭಾರತ ನಿರ್ಮಾಣಕ್ಕೆ ನಾಲ್ವಡಿ ಕೊಡುಗೆ ದೊಡ್ಡದು: ಡಾ.ಈ.ಸಿ.ನಿಂಗರಾಜ್‌ಗೌಡ

ಆಧುನಿಕ ಭಾರತ ನಿರ್ಮಾಣಕ್ಕೆ ನಾಲ್ವಡಿ ಕೊಡುಗೆ ದೊಡ್ಡದು: ಡಾ.ಈ.ಸಿ.ನಿಂಗರಾಜ್‌ಗೌಡ


ಮಂಡ್ಯ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವು ಶಿಕ್ಷಣ, ಸಾಮಾಜಿಕ ನ್ಯಾಯ, ಕೈಗಾರಿಕೆ, ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆಧುನಿಕ ಭಾರತಕ್ಕೆ ಮಾದರಿಯಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ತಿಳಿಸಿದರು.

ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ವತಿಯಿಂದ ಭಾನುವಾರ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ೧೨ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾಲ್ವಡಿ ಅವರ ಆಡಳಿತವನ್ನು ಮೈಸೂರಿನ ಸುವರ್ಣಯುಗ ಎಂದು ಕರೆಯಲಾಗುತ್ತದೆ. ಅವರು ಮಹಿಳಾ ಶಿಕ್ಷಣ, ದಲಿತರ ಉನ್ನತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ಅಭಿವೃದ್ಧಿ, ಮತ್ತು ಸಾಮಾಜಿಕ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದರು. ೧೯೦೭ರಲ್ಲಿ ಮೈಸೂರು ಪ್ರತಿನಿಧಿ ಸಭೆಯನ್ನು ದ್ವಿಸಭಾ ವ್ಯವಸ್ಥೆಯಾಗಿ ಪರಿವರ್ತಿಸಿದರು. ಅವರು ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರಾಗಿದ್ದು, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅನ್ನು ಸ್ಥಾಪಿಸಲು ೩೭೧ ಎಕರೆ ಭೂಮಿಯನ್ನು ದಾನವಾಗಿ ನೀಡಿದರು. ಬೆಂಗಳೂರಿನಲ್ಲಿ ಹೆಚ್.ಎ.ಎಲ್ ಸ್ಥಾಪಿಸಲು ನೆರವಾದರು ಎಂದು ಶ್ಲಾಘಿಸಿದರು.

ನಾಲ್ವಡಿ ಅವರು ಸಂಗೀತದಲ್ಲಿ ಪರಿಣಿತರಾಗಿದ್ದು, ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತವನ್ನು ಪ್ರೋತ್ಸಾಹಿಸಿದರು. ಅವರು ಫ್ಲೂಟ್, ವೈಲಿನ್, ಸ್ಯಾಕ್ಸೋಫೋನ್, ಪಿಯಾನೋ, ಮೃದಂಗ, ನಾದಸ್ವರ, ಸೀತಾರ್ ಮತ್ತು ವೀಣೆಯಂತಹ ಎಂಟು ಸಂಗೀತ ಸಾಧನಗಳಲ್ಲಿ ಪರಿಣಿತರಾಗಿದ್ದರು. ಅವರ ಕಾಲದಲ್ಲಿ ಮೈಸೂರು ರಾಜ್ಯ ಏಷ್ಯಾದಲ್ಲಿ ಮೊದಲ ಹೈಡ್ರೋಎಲೆಕ್ಟ್ರಿಕ್ ವಿದ್ಯುತ್ ಉತ್ಪಾದನೆ ಮಾಡಿದ ರಾಜ್ಯವಾಗಿದ್ದು, ಬೆಂಗಳೂರು ಮೊದಲ ಏಷ್ಯನ್ ನಗರವಾಗಿ ಬೀದಿ ದೀಪಗಳನ್ನು ಹೊಂದಿತು ಎಂದು ಬಣ್ಣಿಸಿದರು.

ಅವರು ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರಂತಹ ಪ್ರಸಿದ್ಧ ದಿವಾನರೊಂದಿಗೆ ಕೆಲಸ ಮಾಡಿದರು. ಅವರ ಆಡಳಿತವನ್ನು ನೋಡಿ ಮಹಾತ್ಮಾ ಗಾಂಧೀಜಿ ಒಡೆಯರ್ ಅವರಿಗೆ ರಾಜರ್ಷಿ ಎಂದು ಕರೆದರು, ಮತ್ತು ಲಾರ್ಡ್ ಸ್ಯಾಂಕಿ ಅವರು ಮೈಸೂರು ವಿಶ್ವದ ಅತ್ಯುತ್ತಮ ಆಡಳಿತ ರಾಜ್ಯ ಎಂದು ಪ್ರಶಂಸಿಸಿದ್ದರು ಎಂದು ತಿಳಿಸಿದರು.
ಮಂಡ್ಯ, ಬೆಂಗಳೂರು ಜಿಲ್ಲೆಗಳಿಗೆ ಕೆ.ಆರ್.ಎಸ್. ಅಣೆಕಟ್ಟೆ ಕಟ್ಟುವ ಮೂಲಕ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಭದ್ರಾವತಿ ಉಕ್ಕು ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್, ಕನ್ನಡ ಸಾಹಿತ್ಯ ಪರಿಷತ್ತು, ಒಕ್ಕಲಿಗ ಸಂಘ, ಮೈಸೂರು ವಿವಿ ಸ್ಥಾಪನೆ ಹೀಗೆ ಅವರ ಕೊಡುಗೆಗಳು ಅಷ್ಟಿಷ್ಟಲ್ಲ ಎಂದು ಹೇಳಿದರು.

ಮೀಸಲಾತಿ ಹೆಸರಿನಲ್ಲಿ ರಾಜಕೀಯ ಮಾಡುವ ರಾಜಕೀಯ ನಾಯಕರಿಗೆ ಅಂದೇ ಮಾದರಿಯಾಗಿದ್ದ ನಾಲ್ವಡಿ ಅವರು, ೧೯೨೦ರಲ್ಲೇ ಹಿಂದುಳಿದ ವರ್ಗ, ದಲಿತ ಸಮುದಾಯಕ್ಕೆ ಮೀಸಲಾತಿ ತಂದರು. ವಯಸ್ಕರ ಶಿಕ್ಷಣದ ಮೂಲಕ ೧೯೧೧ರಲ್ಲೇ ಆಧುನಿಕತೆಯ ಆಡಳಿತವನ್ನು ಮೈಗೂಡಿಸಿಕೊಂಡು ದೇವದಾಸಿ, ಜಾತಿ ಪದ್ದತಿ, ವಿಧವೆಯರಿಗೆ ಮರು ಮದುವೆ, ಉಚಿತ ಶಿಕ್ಷಣ, ಸ್ರೀಯರಿಗೆ ಮತದಾನದ ಹಕ್ಕು, ಕಾರ್ಮಿಕ ಪರಿಹಾರ ಹೀಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.

ನಾಲ್ವಡಿ ಕೊಡುಗೆ ಪಠ್ಯ ಪುಸ್ತಕದಲ್ಲಿ ಇಲ್ಲದರುವುದು ಶೋಚನೀಯ. ಕೇಂದ್ರ, ರಾಜ್ಯ ಸರ್ಕಾರ ಇನ್ನಾದರೂ ಪಠ್ಯದಲ್ಲಿ ನಾಲ್ವಡಿ ಹಾಗೂ ಮಹನೀಯರ ಪಾಠ, ಪ್ರವಚನವನ್ನು ಪುಸ್ತಕದ ಮೂಲಕ ಹೊರತರಲಿ ಎಂದು ಮನವಿ ಮಾಡಿದರು.
ಡಿ.ಎಸ್.ವೀರಯ್ಯ ಅವರನ್ನು ರಾಜಕಾರಣಿ ಆಗಿ ನಾವು ನೋಡಿದ್ದೇವೆ. ವಿಧಾನಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಎರಡು ಬಾರಿ ಪರಿಷತ್ ಸದಸ್ಯರಾಗಿ, ಎರಡು ಬಾರಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ, ದೇವರಾಜ ಅರಸ್ ಟಕ್ ಟರ್ಮಿನಲ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡು ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಶ್ರಮಿಸಿದ ಅಪರೂಪದ ವ್ಯಕ್ತಿ ವೀರಯ್ಯನವರು ಎಂದು ಶ್ಲಾಘಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕವಿ ಡಿ.ಎಸ್.ವೀರಯ್ಯ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ದೇಶಕ್ಕೆ ಮಾದರಿ. ಅವರ ಆಡಳಿತ, ಸಾಮಾಜಿಕ ಸೇವೆ ಅನನ್ಯವಾದದ್ದು. ಜನರ ಸಮಸ್ಯೆಗಳನ್ನು ಬಗ್ಗೆ ಅವರಿಗೆ ಅರಿವಿತ್ತು. ಮಂಡ್ಯ ಜಿಲ್ಲೆ ಶ್ರೀಮಂತವಾಗಿ ಸಮೃದ್ದಿಯಾಗಿದೆ. ಇದಕ್ಕೆ ನಾಲ್ವಡಿ ಅವರ ಕೊಡುಗೆ ಕಾರಣ ಎಂದು ಶ್ಲಾಘಿಸಿದರು.
ಕನ್ನಡ ಭಾಷೆ ಉಳಿದು, ಬೆಳೆಯುತ್ತಿದ್ದರೆ ಅದು ಮಂಡ್ಯದಿಂದ. ರಾಜಕೀಯವಾಗಿ ಸಹ ಮಂಡ್ಯ ಹೆಸರು ಮಾಡಿದೆ. ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ ಅವರನ್ನು ಮಂಡ್ಯ ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನಾಗಿ ಕೊಟ್ಟಿದೆ. ಈ ಜಿಲ್ಲೆಯ ಹಲವು ಬೇರೆ ಜಿಲ್ಲೆಗೆ ಹೋಗಿ ರಾಜಕಾರಣ ಮಾಡಿದ್ದಾರೆ. ಇಲ್ಲಿ ಹುಟ್ಟಿದ ನಾನು ಕೋಲಾರದಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆ ಪರಿಗಣಿಸಿ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸುವಂತೆ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್ ಗೌಡ ಒತ್ತಾಯಿಸಿ, ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಂಡರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧನೆಗೈದ ಬಿ.ಸುನೀಲ್ ಕುಮಾರ್, ಎಲ್.ಬಿ.ಮಂಜುನಾಥ್, ಮೀನಕೆರೆ ಆಂಜನಪ್ಪ, ಆರ್.ಭರಣಿ ಹರೀಶ್, ಡಾ.ನಾಗೇಶ್, ಎಂ.ಬಾಬು, ಸುಖಾನಂದಶೆಟ್ಟಿ, ಪಿ.ಎನ್.ಶ್ರೀನಾಥ್, ರಾಮಕೃಷ್ಣಯ್ಯ, ಎಚ್.ಟಿ.ಪಾರ್ವತಮ್ಮ, ಸಿರಿಗಂಧ ರಾಮಕೃಷ್ಣ, ಡಾ.ಶ್ರೀಧರ್ ಹೆಗಡೆ, ಕೆ.ಎನ್.ರಾಮು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಖ್ಯಾತ ವೈದ್ಯ ಹಾಗೂ ಸಾಹಿತಿ ಡಾ.ಚಂದ್ರಶೇಖರ್, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಚಿನ್ನಸ್ವಾಮಿ ಸೋಸಲೆ, ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪದಾಧಿಕಾರಿಗಳಾದ ಮಂಗಲ ಶಿವಣ್ಣ, ನಾಗೇಶ್ ರಾಗಿಮುದ್ದನಹಳ್ಳಿ, ರೂಪ ಹೊಸಹಳ್ಳಿ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular