ಮಂಡ್ಯ: ಶಿಕ್ಷಣ, ಆರೋಗ್ಯ, ನೀರಾವರಿ, ಸಾಮಾಜಿಕ ನ್ಯಾಯ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಂದಿಗೂ ಪ್ರಸ್ತುತವಾಗಿದ್ದು, ಪ್ರಸ್ತುತ ರಾಜಕಾರಣಕ್ಕೆ ಇವರ ಸೇವೆ ಅಗತ್ಯವಾಗಿದೆ ಎಂದು ಜಿಲ್ಲಾ ಅರಸು ಸಂಘದ ಅಧ್ಯಕ್ಷ ಪುಟ್ಟಬುದ್ಧಿ ರಾಜೇಅರಸ್ ತಿಳಿಸಿದರು.
ನಗರದ ಸುಭಾಷ್ನಗರದಲ್ಲಿರುವ ಜಿಲ್ಲಾ ಅರಸು ಸಂಘ ಹಾಗೂ ಜಿಲ್ಲಾ ಮಹಿಳಾ ಅರಸು ಸಂಘದ ವತಿಯಿಂದ ಆಯೋಜಿಸಿದ್ದ ರಾಜರ್ಷಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ರವರ ೧೪೧ನೇ ಜನ್ಮ ಶತಮಾನೋತ್ಸವ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕರುನಾಡಿನ ಭಾಗ್ಯವಿಧಾತರಾದ ಒಡೆಯರ್ ಅವರು ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ತಂದರು. ಮಹಾತ್ಮಗಾಂಧಿಜೀ ಮತ್ತು ಪ್ರಜೆಗಳಿಂದ ರಾಜರ್ಷಿ ಬಿರುದು ಪಡೆದಿದ್ದ ಅವರು ಪ್ರಜೆಗಳ ನೆಮ್ಮದಿಯ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಸ್ಮರಿಸಿದರು.
೧೯೧೧ ರಲ್ಲಿ ಆರಂಭವಾದ ಕೃಷ್ಣರಾಜ ಸಾಗರ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. ೧೯೦೦ ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು, ಇದು ಭಾರತದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಲಾಯಿತು. ನಾಲ್ವಡಿ ಕೃಷ್ಣರಾಜರ ಮತ್ತೊಂದು ಮಹತ್ತರ ಸಾಧನೆಯೆಂದರೆ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದುದು. ಕನ್ನಡ ಸಾಹಿತ್ಯ ಪರಿಷತ್ತು ಆರಂಭಗೊಂಡಿತು ಎಂದು ಸ್ಮರಿಸಿದರು.
ಇದೇ ಸಂಧಭದಲ್ಲಿ ಅರಸು ಸಂಘ ಹಾಗೂ ಮಹಿಳಾ ಅರಸು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಾಜಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅರಸು ಸಂಘದ ಉಪಾಧ್ಯಕ್ಷ ಮಾದರಾಜೇ ಅರಸ್ , ನಂಜರಾಜೇ ಅರಸ್ , ಕಾರ್ಯದರ್ಶಿ ದೇವರಾಜೇ ಅರಸ್ , ಖಜಾಂಜಿ ಬಸವರಾಜೇ ಅರಸ್ , ರಾಮರಾಜೇ ಅರಸ್ , ಲಿಂಗರಾಜೇ ಅರಸ್ , ಮಹಿಳಾ ಸಂಘದ ಅಧ್ಯಕ್ಷರಾದ ರಜಿನಿ ಅರಸ್ , ದೇವೇರಮ್ಮಣಿ , ಬಸವರಾಜಮ್ಮಣಿ , ಉಮಾ , ಗೌರಮ್ಮಣ್ಣಿ , ಸರೋಜ ಅರಸ್ , ಹೊಸಹಳ್ಳಿ ಶಿವು , ಶಿವಕುಮಾರ್ ಕೆಂಪಯ್ಯ ಸೇರಿದಂತೆ ಇನಿತ್ತರರು ಇದ್ದರು.
ಮಂಡ್ಯ ನಗರದ ಸುಭಾಷ್ನಗರದಲ್ಲಿರುವ ಜಿಲ್ಲಾ ಅರಸು ಸಂಘ ಹಾಗೂ ಜಿಲ್ಲಾ ಮಹಿಳಾ ಅರಸು ಸಂಘದ ವತಿಯಿಂದ ಆಯೋಜಿಸಿದ್ದ ರಾಜರ್ಷಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ರವರ ೧೪೧ನೇ ಜನ್ಮ ಶತಮಾನೋತ್ಸವ ಆಚರಣೆಗೆ ಅರಸು ಸಂಘದ ಅಧ್ಯಕ್ಷ ಪುಟ್ಟಬುದ್ಧಿರಾಜೇಅರಸ್ ಚಾಲನೆ ನೀಡಿದರು.