ಉಡುಪಿ: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಎರಡನೇ ಬಾರಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿ ಇಂದು ಶನಿವಾರ ಆದೇಶ ನೀಡಿದೆ.
ಚೌಗುಲೆ ಮಾ.೧೩ರಂದು ಎರಡನೇ ಬಾರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗೆ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಮಾ.೨೭ರಂದು ಆಕ್ಷೇಪಣೆ ಸಲ್ಲಿಸಿದ್ದರು. ಈ ಕುರಿತು ಆರೋಪಿ ಪರ ವಕೀಲ ರಾಜೇಶ್ ಹಾಗೂ ವಿಶೇಷ ಸರಕಾರಿ ಅಭಿಯೋಜಕರ ಮಧ್ಯೆ ವಾದ ಪ್ರತಿವಾದಗಳು ನಡೆದವು. ಎರಡು ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಜಾಮೀನು ಅರ್ಜಿಯ ಕುರಿತ ಅಂತಿಮ ಆದೇಶವನ್ನು ಮಾ.೩೦ಕ್ಕೆ ನಿಗದಿ ಪಡಿಸಿ ಆದೇಶ ನೀಡಿದರು.
ಆರೋಪಿ ಮೇಲಿನ ಆರೋಪಗಳು ಎಫ್ ಎಸ್ ಎಲ್ ವರದಿ ಸೇರಿದಂತೆ ಇನ್ನಿತರ ಸಾಕ್ಷಿಗಳಿಂದ ಮೇಲ್ನೋಟಕ್ಕೆ ಕಂಡು ಬಂದಿದ್ದು ಜಾಮೀನು ನೀಡಿದರೆ ಸಾಕ್ಷಿಗಳಿಗೆ ಹೆದರಿಸುವ ಸಾಧ್ಯತೆ ಇದೆ. ನ್ಯಾಯಾಂಗ ಬಂಧನದಲ್ಲೂ ಆರೋಪಿಗೆ ಚಿಕಿತ್ಸೆ ಪಡೆಯುವ ಅವಕಾಶ ಇರುವುದರಿಂದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದಾಗಿ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.