ಬೆಂಗಳೂರು: ಗಾಯಕ ಸೋನು ನಿಗಂ ಅವರು ಕನ್ನಡಿಗರ ಭಾಷಾಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ್ದಕ್ಕೆ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕನ್ನಡಪರ ಸಂಘಟನೆಗಳು ದೂರು ದಾಖಲಿಸಿದ್ದವು. ದೂರಿನ ಮೇರೆಗೆ ಪೊಲೀಸರು ನಿಗಮ್ಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ನಿಗಂ ಮೊದಲ ನೋಟಿಸ್ಗೆ ಸ್ಪಂದಿಸದ ಕಾರಣ ಎರಡನೇ ನೋಟಿಸ್ ಕಳುಹಿಸಲಾಯಿತು. ಇದರ ಬೆನ್ನಲ್ಲೆ ಅವರು ತಮ್ಮ ಮೇಲಿನ ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ಮೆಟ್ಟಿಲೇರಿದರು.
ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ನ್ಯಾಯಾಲಯದಲ್ಲಿ ಮಾಹಿತಿ ನೀಡಿದರು. ನಿಗಮ್ ಪರ ವಕೀಲರು, ಬೆಂಗಳೂರಿಗೆ ಬರುವುದರಿಂದ ಅಶಾಂತಿ ಉಂಟಾಗುವ ಸಾಧ್ಯತೆ ಇದ್ದು, ವಿಚಾರಣೆಗೆ ಖುದ್ದಾಗಿ ಹಾಜರಾಗದಂತೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರು, ನಿಗಮ್ ಅವರಿರುವ ಸ್ಥಳದಲ್ಲೇ ಅಥವಾ ವಿಡಿಯೋ ಕಾಲ್ ಮೂಲಕ ವಿಚಾರಣೆ ನಡೆಸುವಂತೆ ಸೂಚಿಸಿದರು.
ಅದೇ ವೇಳೆ, ನಿಗಂ ವಿರುದ್ಧ ಯಾವುದೇ ಬಲವಂತ ಕ್ರಮ ಕೈಗೊಳ್ಳಬಾರದು ಹಾಗೂ ನ್ಯಾಯಾಲಯದ ಅನುಮತಿಯಿಲ್ಲದೆ ಚಾರ್ಜ್ಶೀಟ್ ಸಲ್ಲಿಸಬಾರದು ಎಂದು ತಿಳಿಸಿದರು. ಇದೀಗ ಪೊಲೀಸರು ಮುಂಬೈಗೆ ತೆರಳಿ ನಿಗಮ್ ನಿವಾಸದಲ್ಲೇ ಅಥವಾ ಆನ್ಲೈನ್ ಮೂಲಕ ವಿಚಾರಣೆ ನಡೆಸಲಿದ್ದಾರೆ.
ಇತ್ತೀಚೆಗೆ ಬೆಂಗಳೂರು ಖಾಸಗಿ ಕಾಲೇಜಿನಲ್ಲಿ ಲೈವ್ ಶೋ ನಡೆಸಿದಾಗ ನಿಗಂ ಕನ್ನಡ ಹಾಡಿಗೆ ಒತ್ತಡದ ಬೆನ್ನಲ್ಲೆ ವಿವಾದಾತ್ಮಕವಾಗಿ “ಪಹಲ್ಗಾಮ್ ದಾಳಿ” ಹೇಳಿಕೆ ನೀಡಿದ್ದರು. ಇದರ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಚಿತ್ರರಂಗದಲ್ಲಿ ನಿಗಮ್ಗೆ ನಿಷೇಧ ಹಾಕಬೇಕು ಎಂದು ಒತ್ತಾಯಿಸಿತ್ತು. ನಂತರ ನಿಗಮ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು.