ಬೆಂಗಳೂರು: ಅರ್ಜಿ ಸಲ್ಲಿಸಿ, ಮುಂಗಡ ಹಣವನ್ನು ಪಾವತಿ ಮಾಡಿ ಒಂದು ವರ್ಷವಾದರೂ ಗೃಹಭಾಗ್ಯ ನೀಡದ ಸರ್ಕಾರ ಈಗ ಕೋಗಿಲು ಲೇಔಟ್ನಲ್ಲಿ ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ನೆಲೆಸಿದವರಿಗೆ ಗೃಹಭಾಗ್ಯ ನೀಡಲು ಮುಂದಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಹೌದು. ಬೈಯಪ್ಪನಹಳ್ಳಿಯ ರಾಜೀವ್ ಗಾಂಧಿ ವಸತಿ ನಿಗಮದ ಅಪಾರ್ಟ್ಮೆಂಟ್ನಲ್ಲಿರುವ ಮನೆಗಳಿಗೆ ಒಂದು ವರ್ಷದ ಹಿಂದೆಯೇ ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. 1188 ಮನೆಗಳಿಗೆ 594 ಮಂದಿ ಅರ್ಜಿ ಸಲ್ಲಿಕೆ ಮಾಡಿ ಒಂದು ವರ್ಷವಾದರೂ ಮನೆ ಸಿಕ್ಕಿಲ್ಲ.
ಬಿಬಿಎಂಪಿಯಿಂದ ಐದು ಲಕ್ಷ ರೂ. ಹಣ ಬಿಡುಗಡೆಯಾಗದ್ದಕ್ಕೆ ಮನೆ ಹಂಚಿಕೆಯಾಗಿಲ್ಲ. ಇನ್ನು ಕೆಲವರು 50 ಸಾವಿರ ರೂ. ಮುಂಗಡ ಹಣವನ್ನು ಪಾವತಿಸಿದ್ದರೂ ಸಂಪೂರ್ಣ ಹಣವನ್ನು ಪಾವತಿ ಮಾಡಿಲ್ಲ ಎಂದು ಕಾರಣ ನೀಡಿ ಮನೆಯನ್ನು ವಿತರಿಸಿಲ್ಲ.
ಒಟ್ಟು 1,188 ಮನೆಗಳಿದ್ದು ಪರಿಶಿಷ್ಟ ಜಾತಿ, ಪಂಗಡದವರಿಗೆ 225, ಜನರಲ್ ಕಟಗರಿಯವರಿಗೆ 296, ಅಲ್ಪ ಸಂಖ್ಯಾತರಿಗೆ 61 ಮನೆಯನ್ನು ಹಂಚಿಕೆ ಮಾಡಲಾಗಿದೆ. ಈಗಅಪಾರ್ಟ್ಮೆಂಟ್ ನಲ್ಲಿ 593 ಮನೆಗಳನ್ನು ಹಂಚಿಕೆ ಮಾಡಲು ಬಾಕಿಯಿದೆ.
ಸದ್ಯ ಈಗ ಶಾಸಕರ ಕೋಟಾದಡಿ ಮಾತ್ರ ಮನೆ ನೀಡಲು ಸಾಧ್ಯವಿದೆ. ಹೀಗಾಗಿ ಶಾಸಕರ ಕೋಟಾದಡಿ ಕೋಗಿಲು ನಿರಾಶ್ರಿತರಿಗೆ ಮನೆ ನೀಡಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ವಸತಿ ಇಲಾಖೆಯಿಂದ ಸಿಕ್ಕಿದೆ.
ರಾಜೀವ್ ಗಾಂಧಿ ವಸತಿ ಮನೆ ಪಡೆಯೋಕೆ ನಿರಾಶ್ರಿತರು ಕೂಡ ದುಡ್ಡು ಕಟ್ಟಲೇಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ 5 ಲಕ್ಷ ರೂ, ವಸತಿ ಇಲಾಖೆಯಿಂದ 3.5 ಲಕ್ಷ ರೂ, ಸಬ್ಸಿಡಿ ನೀಡಿದರೂ ಮತ್ತೆ 2.5 ಲಕ್ಷ ರೂ. ಹಣವನ್ನು ನಿರಾಶ್ರಿತರು ಕಟ್ಟಬೇಕು. ಹೀಗಾಗಿ ನಿರಾಶ್ರಿತರು ಹೇಗೆ 2.5 ಲಕ್ಷ ರೂ. ಪಾವತಿಸುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆ.
ಹೀಗಾಗಿ ಸರ್ಕಾರ ಸಾಲ ನೀಡುತ್ತಾ? ಸಾಲ ಕೊಡಿಸುತ್ತಾ? ಅಥವಾ ಬೇರೆ ಯಾರಾದರೂ ಇವರಿಗೆ ಹಣಕಾಸಿನ ಸಹಾಯ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.



