ಬೆಂಗಳೂರು:ವಿದ್ಯುತ್ ಸಂಪರ್ಕ ಪಡೆಯಲು ಈಗ ಒಬ್ಟೈನಿಂಗ್ ಆಕ್ಪ್ಯುಪೇಶನ್ ಸರ್ಟಿಫಿಕೇಟ್ (ಒಸಿ) ಕಡ್ಡಾಯಗೊಳಿಸಿರುವುದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆ ಕುರಿತು ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಅವರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಹವಾಲುಗಳನ್ನು ಸ್ವೀಕರಿಸಿದ ನಂತರ ಮಾತನಾಡಿದರು. “ಒಸಿ ಕಡ್ಡಾಯದಿಂದ ಮನೆ ನಿರ್ಮಾಣ ಹಾಗೂ ಕೈಗಾರಿಕೋದ್ಯಮಕ್ಕೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿಗೆ ವರದಿ ನೀಡುವಂತೆ ಸೂಚಿಸಿದ್ದು, ಅದನಂತರ ತ್ವರಿತವಾಗಿ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ,” ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಒಸಿ ಕಡ್ಡಾಯವಿದ್ದರೂ, ಸಾರ್ವಜನಿಕ ಸಮಸ್ಯೆ ಹಿತದೃಷ್ಟಿಯಿಂದ ಬೈಲಾ ತಿದ್ದುಪಡಿ ಅಗತ್ಯವಾಗಿದೆ ಎಂದು ಜಾರ್ಜ್ ಹೇಳಿದರು.
ಗೃಹಜ್ಯೋತಿ ಯೋಜನೆ ಬಗ್ಗೆ ಸ್ಪಷ್ಟನೆ
ಗೃಹಜ್ಯೋತಿ ಯೋಜನೆಯಡಿ ಬಾಡಿಗೆ ಮನೆ ಬದಲಿಸಿದಾಗ ಆರ್ಆರ್ ನಂಬರ್ ಡಿ-ಲಿಂಕ್ ಹಾಗೂ ಲಿಂಕ್ ಮಾಡುವಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸೇವೆ ಆನ್ಲೈನ್ನಲ್ಲಿ ಲಭ್ಯವಿದ್ದು, ತಾಂತ್ರಿಕ ಸಮಸ್ಯೆಯಿದ್ದರೆ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.
ಪ್ರಸ್ತುತ ಯೋಜನೆಯಡಿ 1.60 ಕೋಟಿ ಕುಟುಂಬಗಳು ಶೂನ್ಯ ಬಿಲ್ ಪಡೆಯುತ್ತಿದ್ದು, ಸರಕಾರ ಈಗಾಗಲೇ ₹9,000 ಕೋಟಿ ಎಸ್ಕಾಂಗಳಿಗೆ ಬಿಡುಗಡೆ ಮಾಡಿದೆ. ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಆದ್ಯತೆ ನೀಡಲಾಗಿದ್ದು, ಶೇ.65ರಷ್ಟು ವಿದ್ಯುತ್ ಈ ಮೂಲಗಳಿಂದ ಬರುತ್ತಿದೆ. ಅನ್ಯ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ಬೇಸಿಗೆಯ ಅವಧಿಯಲ್ಲಿಯೂ ಜನತೆಗೆ ಲಭ್ಯವಿರುವಂತೆ ಸರಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದರು.