ಕೊಪ್ಪಳ: ಹೆಂಡತಿಯ ಕೊಲೆಗೈದು 23 ವರ್ಷ ತಲೆಮರೆಸಿಕೊಂಡಿದ್ದ 75 ವರ್ಷದ ಆರೋಪಿಯನ್ನು ಗಂಗಾವತಿ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಈಗ 23 ವರ್ಷಗಳ ನಂತರ ಬೆಳಕಿಗೆ ಬಂದಿದೆ. ತನ್ನ ಮೂರನೇ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿ, ಆಕೆಯ ಶವವನ್ನು ಬಸ್ಸಿನಲ್ಲಿ ಲಗೇಜ್ ಎಂದು ಕಳುಹಿಸಿದ್ದ ವೃದ್ಧನೊಬ್ಬನನ್ನು ಪೊಲೀಸರು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಎರಡು ದಶಕಗಳ ಹಿಂದೆ ಈ ಕ್ರೂರಕೃತ್ಯ ನಡೆದಿದ್ದು, ಆರೋಪಿಯಾಗಿದ್ದ ವ್ಯಕ್ತಿ ಇಲ್ಲಿಯವರೆಗೆ ತಲೆ ಮರೆಸಿಕೊಂಡಿದ್ದ. ಇದೀಗ ರಾಯಚೂರು ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಹನುಮಂತ ಹುಸೇನಪ್ಪ ಬಾದರ್ಲಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕ ಅಧಿಕಾರಿಯಾಗಿ ಕೆಲಸ ಕಾರ್ಯನಿರ್ವಹಿಸುತ್ತಿದ್ದ. ಈತನ ಮೊದಲ ಹೆಂಡತಿ ಸಾವನ್ನಪ್ಪಿದ ನಂತರ ಎರಡನೇ ಮದುವೆ ಆಗಿದ್ದ. ಆಕೆ ಕೂಡ ಸಂಸಾರ ಮಾಡದೆ ಜಗಳ ಮಾಡಿ ಬಿಟ್ಟು ಹೋಗಿದ್ದಳು. ಬಳಿಕ ತಾನು ಸರ್ಕಾರಿ ನೌಕರಸ್ಥ ಎಂಬ ಕಾರಣ ಹೇಳಿ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ರೇಣುಕಮ್ಮ ಎನ್ನುವ ಮಹಿಳೆಯೊಬ್ಬರನ್ನ 3ನೇ ಮದುವೆಯಾಗಿ, ಗಂಗಾವತಿ ನಗರದ ಲಕ್ಷ್ಮಿ ಕ್ಯಾಂಪಿನಲ್ಲಿ ಹೆಂಡತಿ ಜೊತೆಗೆ ವಾಸ ಮಾಡುತ್ತಿದ್ದ.
2002ರಲ್ಲಿ ನಡೆದ ಈ ದಾರುಣ ಘಟನೆಯ ಆರೋಪಿ ಹುಸೇನಪ್ಪ (ಪ್ರಸ್ತುತ ವಯಸ್ಸು 75), ಕೊಪ್ಪಳ ಜಿಲ್ಲೆಯ ನಿವಾಸಿ. ಆತ ತನ್ನ ಮೂರನೇ ಪತ್ನಿಯನ್ನು ಕೊಚ್ಚಿ ಹತ್ಯೆ ಮಾಡಿದ್ದ. ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಲಗೇಜ್ ಬ್ಯಾಗ್ನಲ್ಲಿ ಇಟ್ಟು, ಕಂಪ್ಲಿಯಿಂದ ಬಸ್ಸಿನಲ್ಲಿ ರವಾನಿಸಿದ್ದ. ಈ ವೇಳೆ ಬಸ್ಸು ಸಿಬ್ಬಂದಿಗೆ ಅದು ಶವ ಎಂಬುದು ಗೊತ್ತಾಗದೆ ಲಗೇಜ್ ಎಂದೇ ಭಾವಿಸಿ ಸಾಗಿಸಿದ್ದರು. ಆದರೆ, ಬಳಿಕ ಘಟನೆ ಬೆಳಕಿಗೆ ಬಂದಾಗ ಪೊಲೀಸರು ತನಿಖೆ ಆರಂಭಿಸಿದ್ದರು.
ಆದರೆ, ತನಿಖೆಯ ಪ್ರಾರಂಭದಲ್ಲೇ ಹುಸೇನಪ್ಪ ಪರಾರಿಯಾಗಿದ್ದ. ಆತನ ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ಕೂಡ, ಆತನನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಗೆ ಸಾಧ್ಯವಾಗಿರಲಿಲ್ಲ. ಹಲವು ವರ್ಷಗಳ ಕಾಲ ಆತ ತಲೆಮರೆಸಿಕೊಂಡು ಬೇರೊಬ್ಬನಂತೆ ಬದುಕುತ್ತಿದ್ದ.
ಇತ್ತೀಚೆಗೆ, ಸುಮಾರು ಆರು ತಿಂಗಳ ಹಿಂದೆ ಹುಸೇನಪ್ಪ ತನ್ನ ಸ್ವಗ್ರಾಮ ಹಾಲದಾಳಕ್ಕೆ ಮರಳಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿದೆ. ಇದರ ಆಧಾರದ ಮೇಲೆ ಗಂಗಾವತಿ ಉಪವಿಭಾಗದ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಹಂತಕರ ಜಾಡು ಹಿಡಿದು, ಕೊನೆಗೂ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಇದ್ದ ಆತನು ಬಂಧನಕ್ಕೆ ಒಳಗಾಗಿದ್ದಾನೆ.
ಹುಸೇನಪ್ಪನನ್ನು ಬಂಧಿಸಿರುವ ಪೊಲೀಸರು, ಈಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯ ಹಿಂದಿನ ಕಾರಣಗಳು ಹಾಗೂ ಮೂರನೇ ಹೆಂಡತಿಯ ಹತ್ಯೆಗೆ ಕಾರಣವಾದ ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.