ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಉದ್ವಿಗ್ನ ಪರಿಸ್ಥಿತಿಯಲ್ಲಿ, ಭಾರತ ಸರ್ಕಾರವು ತಕ್ಷಣದ ಕ್ರಮ ಕೈಗೊಂಡು “ಆಪರೇಷನ್ ಸಿಂಧು”ದಡಿ ಅಲ್ಲಿರುವ ಭಾರತೀಯರ ಸುರಕ್ಷಿತ ವಾಪಸಿಗೆ ಮುಂದಾಗಿದೆ. ಈ ಆಪರೇಷನ್ನ ಮೊದಲ ಹಂತದಲ್ಲಿ ಇಸ್ರೇಲ್ನಿಂದ 161 ಭಾರತೀಯರು, ಅದರೊಳಗೆ 61 ಕನ್ನಡಿಗರೂ ಸೇರಿ, ಇಂದು ಸುರಕ್ಷಿತವಾಗಿ ನವದೆಹಲಿಗೆ ಆಗಮಿಸಿದರು.
ಇಂದು ಬೆಳಗ್ಗೆ 8.20ಕ್ಕೆ ಜೋರ್ಡಾನ್ನ ಅಮ್ಮಾನ್ ನಿಂದ ಹೊರಟ ವಿಮಾನವು ದೆಹಲಿಗೆ ಬಂದಿಳಿದಾಗ, ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಅವರು ವಿಮಾನ ನಿಲ್ದಾಣದಲ್ಲಿ ಅವರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಹಲವು ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಈ ಆಪರೇಷನ್ ಬಗ್ಗೆ “X” (ಹಳೆಯ ಟ್ವಿಟ್ಟರ್) ನಲ್ಲಿ ಟ್ವೀಟ್ ಮಾಡುತ್ತಾ, “#ಆಪರೇಷನ್ ಸಿಂಧು ಇಸ್ರೇಲ್ ಹಂತವು ಜೂನ್ 23, 2025 ರಂದು ಪ್ರಾರಂಭವಾಯಿತು. ಪ್ರಥಮ ಹಂತದಲ್ಲಿ 161 ಭಾರತೀಯರನ್ನು ಅವರ ಮನೆಗೆ ಕರೆತರುವಲ್ಲಿ ನಾವು ಯಶಸ್ವಿಯಾದೆವು. ಅವರ ಸುರಕ್ಷತೆಯು ನಮ್ಮ ಮೆಚ್ಚಿನ ಆದ್ಯತೆ” ಎಂದು ತಿಳಿಸಿದರು.