ಪಿರಿಯಾಪಟ್ಟಣ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಮತ್ತು ಪ್ರಭಾವ ಹೆಚ್ಚಾಗುತ್ತಿರುವುದನ್ನು ಕಂಡು ವಿರೋಧ ಪಕ್ಷಗಳಿಗೆ ಮರ್ಮಾಘಾತ ವಾಗಿದೆ ಎಂದು ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಲೇವಡಿ ಮಾಡಿದರು.
ತಾಲೂಕಿನ ಪಿ.ಬಸವನಹಳ್ಳಿ, ಗಾಂಧಿನಗರ, ಚರಪುರ, ಪುನಾಡಹಳ್ಳಿ, ಮಲ್ಲಿನಾಥಪುರ, ಹುಣಸವಾಡಿ, ಕಿರಂಗೂರು, ನಂದಿನಾಥಪುರ , ಐಲಾಪುರ, ಕುಂದನಹಳ್ಳಿ ಸರ್ಕಲ್ , ಬೂತನಹಳ್ಳಿ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪಿ.ಬಸವನಹಳ್ಳಿ ಗ್ರಾಮದಲ್ಲಿ ಮಾತನಾಡಿದರು.
ನಾವು ಅಧಿಕಾರಕ್ಕೆ ಬಂದ ಆರಂಭದಲ್ಲಿ ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಇವರಿಂದ ಸಾಧ್ಯವಿದೆಯೇ ಎಂದು ಅಪಹಾಸ್ಯ ಮಾಡಿ ನಿಮ್ಮ ಸರ್ಕಾರದ ಯೋಜನೆಗಳ ವಿಫಲತೆಯ ಕನಸ್ಸು ಕಂಡಿದ್ದರು. ಆದರೆ ನಾವು ಅಧಿಕಾರಕ್ಕೆರಿದ ಕೆಲವೇ ಕೆಲವು ದಿನಗಳಲ್ಲಿ ಜನತೆಗೆ ನೀಡಿದ್ದ ೫ ಭರವಸೆಗಳನ್ನು ಈಡೇರಿದ್ದನ್ನು ಕಂಡು ಈಗ ಬಿಜೆಪಿ, ಜೆಡಿಎಸ್ ನಾಯಕರಿಗೆ ಮರ್ಮಾಘಾತವಾಗಿ ಮೈಪರಚಿಕೊಳ್ಳುತ್ತಿದ್ದಾರೆ ಎಂದ ಅವರು ಗೃಹ ಲಕ್ಷ್ಮಿ ಯೋಜನೆಯ ಹಣ ತಲುಪದೆ ಇದ್ದವರು ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿಸಬೇಕು ಎಂದು ಸಲಹೆ ನೀಡಿದರು.
ರಾಜಕೀಯ ಈರ್ಷೆಗಳಿಗೆ ಬಲಿಯಾಗಬೇಡಿ: ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಜಾತಿ ಧರ್ಮದ ಹೆಸರಿನಲ್ಲಿ ಜನತೆಯನ್ನು ಎತ್ತಿಕಟ್ಟಿ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿಲ್ಲ, ಹೀಗಿರುವಾಗ ಕೆಲವರು ತಮ್ಮ ಸ್ವಾರ್ಥಕ್ಕೆ ಜನರನ್ನು ಬಲಿಪಶು ಮಾಡಲು ನಿಮ್ಮ ನೆಮ್ಮದಿಯನ್ನು ಹಾಳು ಮಾಡಲು ಬಯಸುತ್ತಿದ್ದಾರೆ ಇಂಥವರ ಸ್ವಾರ್ಥಕ್ಕೆ ಜನತೆ ಬಲಿಯಾಗಬಾರದು, ಗ್ರಾಮದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳಬೇಕು ಪುನಾಡಹಳ್ಳಿ ಗ್ರಾಮ ಪಂಚಾಯಿತಿಗೆ ೫೦ ಮನೆಗಳನ್ನು ಮಂಜೂರು ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮನೆ ನೀಡುತ್ತೇನೆ, ಗ್ರಾಮದ ಸಮಸ್ಯೆಗಳಿಗೆ ಹಂತಹಂತವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆಯಾರೂ ಕೂಡ ಕುತಂತ್ರಕ್ಕೆ ಬಲಿಯಾಗಬೇಡಿ ಎಂದರು.
ಕಾಂಗ್ರೆಸ್ ಬಡವರ ಪಕ್ಷ,: ಶ್ರೀಸಾಮಾನ್ಯರ ಅಭಿವೃದ್ದಿಯೇ ನಮ್ಮ ಮೂಲ ಉದ್ದೇಶ, ಕಾಂಗ್ರೆಸ್ ಜಾರಿ ಮಾಡಿದ್ದ ಕಾರ್ಯಕ್ರಮಗಳ ಬಗ್ಗೆ ಬಿಜೆಪಿ ನಾಯಕರಿಗೆ ಹಾಗೂ ಮೋದಿಗೆ ಹೊಟ್ಟೆಉರಿ ಆರಂಭವಾಗಿದೆ, ೫ ಗ್ಯಾರೆಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ ೬೦ ಸಾವಿರ ಕೋಟಿ ವಿನಿಯೋಗ ಮಾಡುತ್ತಿದೆ. ದೇಶದಲ್ಲಿ ಬಡವರಿಗಾಗಿ ಈ ರೀತಿಯ ಯೋಜನೆಗಳನ್ನು ತಂದಿರುವುದು ಕರ್ನಾಟಕ ಮಾತ್ರ, ಹಾಗಾಗಿ ದೇಶದ ಜನತೆ ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ. ಶಕ್ತಿ ಯೋಜನೆಯನ್ನು ಎಲ್ಲಾ ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಜನತೆಗೆ ನೀಡಿದ್ದ ೫ ಭರವಸೆಗಳಲ್ಲಿ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದೇವೆ ಅದೇ ರೀತಿ ನಿರುದ್ಯೋಗಿ ಪದವಿಧರರಿಗಾಗಿ ಡಿಸೆಂಬರ್ ತಿಂಗಳಲ್ಲಿ ಯುವನಿಧಿ ಕಾರ್ಯಕ್ರಮ ಆರಂಭವಾಗಲಿದೆ. ಯಾರೂ ಕೂಡ ಸರ್ಕಾರದ ಯೋಜನೆಗಳಿಂದ ವಂಚಿತವಾಗಬಾರದು ಎಂದು ನೊಂದಣಿ ಪ್ರಕ್ರಿಯೆಯನ್ನು ಇನ್ನೂ ಮುಂದುವರಿಸುತ್ತಿದ್ದೇವೆ ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅಹವಾಲುಗಳ ಸುರಿಮಳೆ: ತಾಲ್ಲೂಕಿನ ಪಿ.ಬಸವನಹಳ್ಳಿ ಗ್ರಾಮದಲ್ಲಿ ಮುಖಂಡ ಬಿ.ಎ.ಪ್ರಕಾಶ್ ಮಾತನಾಡಿ ಗ್ರಾಮದ ಸುತ್ತಮುತ್ತ ಇರುವ ಕೆರೆಗಳನ್ನು ಒತ್ತುವರಿಯನ್ನು ಮಾಡಿಕೊಂಡಿದ್ದು ಇದನ್ನು ತೆರವುಗೊಳಿಸಬೇಕು, ಈ ಭಾಗದಲ್ಲಿ ಅನೇಕ ಸಂಪರ್ಕ ರಸ್ತೆಗಳು ಹಳ್ಳಕೊಳ್ಳಗಳಿಂದ ಕೂಡಿದ್ದು ಇವುಗಳನ್ನು ರಿಪೇರಿ ಮಾಡಬೇಕು, ಪಂಚಾಯಿತಿ ವ್ಯಾಪ್ತಿಯ ಬಡಜನರಿಗೆ ೫೦ ನಿವೇಶನಗಳನ್ನು ಮಂಜೂರು ಮಾಡಿರುವುದು ಸ್ವಾಗತಾರ್ಹ ಅದೇ ರೀತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ತಹಸೀಲ್ದಾರ್ ಕುಂಜಿ ಅಹಮದ್, ತಾಪಂ ಇಒ ಸುನೀಲ್ ಕುಮಾರ್, ಗ್ರಾಪಂ ಪಿಡಿಒ ಮಂಜುನಾಥ್, ನಾಗಶೆಟ್ಟಿ,ಅಧ್ಯಕ್ಷರಾದ ಜಯಮ್ಮ , ಲೋಕೇಶ್, ಉಪಾಧ್ಯಕ್ಷ ಶಿವನಂಜುಡ, ಮುಖಂಡರಾದ ಡಿ.ಟಿ.ಸ್ವಾಮಿ, ಪಿ.ಬಸವನಹಳ್ಳಿ ಪ್ರಕಾಶ್, ರಹಮತ್ ಜಾನ್ ಬಾಬು, ಬಸವರಾಜ್,ನಾಗೇಗೌಡ, ಪಿ.ಮಹದೇವ್, ಯಜಮನ್ ರಾಜೇಗೌಡ, ಶಂಕರೇಗೌಡ, ಗಣೇಶ್, ಪಾಪೇಗೌಡ, ಬಸವಯ್ಯ, ಪ್ರತಾಪ್ ಕುಮಾರ್, ಸುರೇಶ್, ಮೋಹನ್ ಕುಮಾರ್, ಚಂದ್ರು , ನಂದಿನಾಥಪುರ ಸತೀಶ್, ಹುಣಸವಾಡಿ ಹರೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಾದ ಡಾ.ವೈ.ಪ್ರಸಾದ್, ಡಾ.ಸೋಮಯ್ಯ, ವೆಂಕಟೇಶ್, ದಿನೇಶ್, ಮಾದೇಶ್, ಪ್ರಸಾದ್, ಧರ್ಮರಾಜ್, ಪ್ರಸಾದ್, ಚಂದ್ರೇಗೌಡ, ಬಸವರಾಜು, ಸಿಪಿಐ ಕೆ.ವಿ.ಶ್ರೀಧರ್ ಸೇರಿದಂತೆ ಮತ್ತಿತರರು ಹಾಜರಿದ್ದರು.