ಬೆಂಗಳೂರು: ಐಪಿಎಲ್ ಟ್ರೋಫಿ ಜಯದ ಸಂಭ್ರಮಾಚರಣೆ ವೇಳೆ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ ಮತ್ತು ಜೆಡಿಎಸ್ ಗಂಭೀರ ಆರೋಪ ಮಾಡಿವೆ. ಈ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಎಚ್ಡಿಗೆ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಪಕ್ಷದ ಪ್ರಮುಖ ಪ್ರಶ್ನೆಗಳು:
- ಹೊಸ ವರ್ಷಾಚರಣೆಯ ಸಮಯದಲ್ಲಿ ಕೂಡ ಪೊಲೀಸ್ ಆಯುಕ್ತ ಬಿ. ದಯಾನಂದ್ ಇದ್ದರು, ಆಗ ಯಾವ ತೊಂದರೆಯೂ ಆಗಲಿಲ್ಲ. ಈಗ ಏನಾಯಿತು?
- ಕಾಲ್ತುಳಿತದ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದವರು ಪೊಲೀಸರು. ಸರ್ಕಾರ ಇದೀಗ ಅವರೇ ತಪ್ಪು ಮಾಡಿದಂತೆ ಮಾತನಾಡುತ್ತಿದೆ.
- ಅನಧಿಕೃತ ಕಾರ್ಯಕ್ರಮ ಎಂದಾದರೆ ಉಪಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇಕೆ?
- ಸಿಎಂ ಮನೆಗೆ ಫ್ರಾಂಚೈಸಿ ಸದಸ್ಯರನ್ನು ಕರೆದುಕೊಂಡು ಹೋದವರು ಯಾರು?
- ಟ್ರೋಫಿ ಪ್ರದರ್ಶನ ಕಾರ್ಯಕ್ರಮಕ್ಕೆ ಅನುಮತಿ ಇಲ್ಲದಿದ್ದರೆ, ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದೇಕೆ?
‘ಅಮಾನತು ನಾಟಕ’- ಕುಮಾರಸ್ವಾಮಿ
ಕುಮಾರಸ್ವಾಮಿ ಮಾತನಾಡಿ, “ಅಮಾನತು ಮಾಡುವುದು ನಾಟಕ ಮಾತ್ರ. ಒಂದು ತಿಂಗಳು ಮಾತ್ರ ಸಸ್ಪೆಂಡ್ ಅಂತಾ ಹೇಳಿ, ಬಳಿಕ ಮತ್ತೆ ಹುದ್ದೆಗೆ ಹಿಂದಿರುಗಿಸುತ್ತಾರೆ,” ಎಂದು ಟೀಕಿಸಿದರು. “ಪೋಲೀಸ್ ಇಲಾಖೆ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡಿದ ಸರ್ಕಾರವೇ 11 ಮಂದಿ ಅಭಿಮಾನಿಗಳ ಸಾವಿಗೆ ಹೊಣೆಯಾಗಿದೆ,” ಎಂದರು. ಅಪ್ಪಯ್ಯನ ಆತ್ಮೀಯರನ್ನು ರಕ್ಷಿಸಲು ಕವಚ ನೀಡಲಾಗುತ್ತಿದೆ ಎಂದೂ ಹೇಳಿದರು.
ಅಂಧ ಮುಖ್ಯಮಂತ್ರಿ, ಅಂಧ ರಾಜ್ಯ: ಆರ್.ಅಶೋಕ್ ಕಿಡಿ
ಆರ್.ಅಶೋಕ್ ಮಾತನಾಡಿ , ಐಪಿಎಲ್ ಕಪ್ ಗೆದ್ದಿದ್ದು ಆರ್ ಸಿಬಿ ತಂಡ. ಆದರೆ ಫೋಟೊಗೆ ಫೋಸ್ ನೀಡಿದ್ದು ಕೆಪಿಸಿಸಿ ತಂಡ . ಸಿಎಂ ಬ್ಯಾಟ್ಸ್ಮನ್, ಡಿಸಿಎಂ ಬೌಲರ್. ಹಿಟ್ ವಿಕೆಟ್ ಆಗಿದ್ದು ರಾಜ್ಯದ ಜನ,” ಎಂದು ವ್ಯಂಗ್ಯವಾಡಿದರು. ಇವರು ಕುರುಡು ಮುಖ್ಯಮಂತ್ರಿ. ಇಲ್ಲಿ ಸರ್ಕಾರ ಅಪರಾಧಿ. ತಪ್ಪಿತಸ್ಥರು ಸರ್ಕಾರ. ಪೊಲೀಸರನನ್ನ ಹರಕೆಯ ಕುರಿಯನ್ನಾಗಿಸಿದಿರಿ. “ಕ್ರಿಕೆಟ್ನ ಎಬಿಸಿಡಿಯೂ ಗೊತ್ತಿಲ್ಲದವರಿಗೆ ಟ್ರೋಫಿ ಕೈಯಲ್ಲಿ ಇದ್ದೇನು ಪ್ರಯೋಜನ?” ಎಂದು ಪ್ರಶ್ನಿಸಿದರು.
ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸರ್ಕಾರಕ್ಕೆ ನಾಚಿಕೆ ಬೇಡವಾ? ನಮ್ಮದೇನು ತಪ್ಪಿಲ್ಲ ಅಂತ ಸಿಎಂ ಪ್ರೆಸ್ ಮೀಟ್ ಮಾಡಿದ್ರಿ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಕಮಿಷನರ್ ಸಸ್ಪೆಂಡ್ ಆಗಿದ್ದಾರೆ. ರಾಜ್ಯದ ಜನರು ಇಂದು ವಿ ಆರ್ ವಿತ್ ಪೊಲೀಸ್ ಎಂದು ಹೇಳುತ್ತಿದ್ದಾರೆ. ಅನಧಿಕೃತ ಕಾರ್ಯಕ್ರಮ ಎಂದು ನೀವೆ ಎಫ್ ಐಆರ್ ನಲ್ಲಿ ಹೇಳಿದ್ದೀರಾ? ಹಾಗಾದರೆ ಸಿಎಂ ಮನೆಗೆ ಪ್ರಾಂಚೈಸಿ ಅವರನ್ನ ಕರೆದುಕೊಂಡು ಹೋಗಿದ್ದು ಯಾರು. ಕಮಿಷನರ್ ಅನುಮತಿ ಕೊಟ್ಟಿಲ್ಲ ಅಂತಾ ಸಿಎಂಗೆ ಹೇಳಿದವರು ಯಾರು? ವಿಧಾನಸೌಧದಲ್ಲಿ ಏನು ಗಲಾಟೆ ಆಗಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಲಾಟೆ ಆಗಿದ್ದು ಎಂದು ಸಿಎಂ ಹೇಳಿದ್ದಾರೆ. ಆಗಾದರೆ ಸ್ಟೇಡಿಯಂ ಏನು ಕರ್ನಾಕಟದಲ್ಲಿ ಇಲ್ವಾ ಎಂದು ಅಶೋಕ್ ಪ್ರಶ್ನಿಸಿದರು.
ಸಿಎಂ-ಡಿಸಿಎಂ ವಿರುದ್ಧ ವಿಜಯೇಂದ್ರ ಆಕ್ರೋಶ
ವಿಜಯೇಂದ್ರ ಮಾತನಾಡಿ, “ಕಾಲ್ತುಳಿತದ ಮೂಲ ಕಾರಣ ಸರ್ಕಾರ. ಚಿನ್ನಸ್ವಾಮಿ ಕಾರ್ಯಕ್ರಮಕ್ಕೆ ಅನುಮತಿ ಇಲ್ಲದಿದ್ದರೂ ಡಿಕೆ ಶಿವಕುಮಾರ್ ಟ್ರೋಫಿಗೆ ಮುತ್ತಿಕ್ಕಿ ಫೋಟೋ ತೆಗೆಸಿಕೊಂಡದ್ದು ಹೇಗೆ?” ಎಂದು ಪ್ರಶ್ನಿಸಿದರು. ಈ ದುರಂತದ ನಿಜವಾದ ಹೊಣೆಗಾರರನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.