ಬೆಂಗಳೂರು : ರಾಜ್ಯದ ಹಲವೆಡೆ ಮಳೆ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಜೊತೆಗೆ ಚಿಕ್ಕಮಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಗಂಟೆಗೆ 50 ಕಿಲೋಮೀಟರ್ ವೇಗದ ಬಿರುಗಾಳಿ ಹಾಗೂ ಮಳೆಯ ಸಂಭವವಿದ್ದು, ದುರ್ಬಲ ಮರಗಳು ಹಾಗೂ ರೆಂಬೆಗಳು ಬೀಳುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.
ಇತ್ತ, ಬೆಂಗಳೂರಿನಲ್ಲಿ ಬಿರುಸಿನ ಮಳೆಯಿಂದಾಗಿ ಚಾಮರಾಜಪೇಟೆ 5ನೇ ಮುಖ್ಯ ರಸ್ತೆಯಲ್ಲಿ ಬುಡ ಸಮೇತ ಧರೆಗುರುಳಿದ ಮರ ಸ್ಥಳೀಯರ ಆತಂಕಕ್ಕೆ ಕಾರಣವಾಯಿತು. ಅದೃಷ್ಟವಶಾತ್ ಈ ಘಟನೆ ವೇಳೆ ಯಾವುದೇ ಅಪಾಯ ಸಂಭವಿಸಿಲ್ಲ. ಮರ ರಸ್ತೆಗೆ ಬಿದ್ದು ಕೆಲಕಾಲ ರಸ್ತೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಮರ ರಸ್ತೆಯ ಬದಿಯಲ್ಲಿದ್ದ ತಳ್ಳುವ ಗಾಡಿಯ ಮೇಲೆ ಬಿದ್ದರೂ ಹೆಚ್ಚಿನ ಹಾನಿ ತಪ್ಪಿದೆ. ರಾತ್ರಿ 10.45ರ ಸುಮಾರಿಗೆ ಮರ ಧರೆಗುರುಳಿದಾಗ ರಸ್ತೆ ಮೇಲೆ ಯಾರೂ ಸಂಚರಿಸುತ್ತಿರಲಿಲ್ಲ ಎನ್ನುವುದು ಸಮಾಧಾನದ ವಿಷಯವಾಗಿದೆ. ಬಿಬಿಎಂಪಿ ಸಿಬ್ಬಂದಿ ಚಾಮರಾಜಪೇಟೆ ಪೊಲೀಸರ ಸಮ್ಮುಖದಲ್ಲಿ ಮರ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.