ಹುಣಸೂರು: ಗ್ರಾ.ಪಂ. ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೀರುಗಂಟಿಯ ಹುದ್ದೆ ಕಾಯಂ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಪಿಡಿಒ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಇತ್ತೀಚೆಗೆ ರಾಜ್ಯ ಸರ್ಕಾರ ಗ್ರಾ.ಪಂ.ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರುಗಂಟಿಗಳನ್ನು ಕಾಯಂ ಮಾಡಲು ಆದೇಶಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಮುಳ್ಳೂರು ಗ್ರಾಪಂನ ಪಿಡಿಒ ಮಂಜುಳಾ ಅವರು ಗ್ರಾಪಂ ನಲ್ಲಿ ನೀರುಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹದೇವಯ್ಯ ಅವರ ಕಾಯಂ ಮಾಡಿಕೊಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ದೂರಿನನ್ವಯ ಲೋಕಾಯುಕ್ತ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಲಂಚ ನೀಡುವ ವೇಳೆ ಧಾವಿಸಿ ಟ್ರ್ಯಾಪ್ ಮಾಡಿದ್ದಾರೆ.
ಈ ವೇಳೆ ಗಾಬರಿಗೊಂಡ ಮಂಜುಳಾ ತಮ್ಮ ಕೈ ಕೊಯ್ದುಕೊಂಡ ಪರಿಣಾಮ ನೋಟಿನ ಕಂತೆ ಮೇಲೆ ರಕ್ತ ಬಿದ್ದಿದೆ. ನಂತರ ಪಿಡಿಒರನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಲಾಯಿತು.



