ಮೈಸೂರು: ನಗರದ ಉತ್ತಮ ಪರಿಸರ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ಮುಕ್ತ ಮೈಸೂರಿಗೆ ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಶಾಸಕ ಹರೀಶ್ ಗೌಡ ಹೇಳಿದರು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಜೂನಿಯರ್ ಮಹಾರಾಣಿ ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟಿ, ಕಾಲೇಜಿನ ವಿದ್ಯಾರ್ಥಿಗಳಿಗೆ ಬಟ್ಟೆ ಬ್ಯಾಗನ್ನು ವಿತರಿಸಿ ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು ಪ್ಲಾಸ್ಟಿಕ್ ಬಳಕೆಯಿಂದಾಗಿ ಆರೋಗ್ಯ ಹಾಳಾಗುತ್ತದೆ, ಪ್ಲಾಸ್ಟಿಕ್ ಎಲ್ಲೆಂದೆರಲ್ಲಿ ಬಿಸಾಡುತ್ತಿರುವ ಕಾರಣ ಜಾನುವಾರುಗಳು ಅವುಗಳನ್ನು ತಿಂದಿ ಸಾಯುತ್ತಿವೆ, ಹೀಗಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು, ಪ್ಲಾಸ್ಟಿಕ್ ವಿರುದ್ಧ ದೊಡ್ಡ ಆಂದೋಲನವಾಗಬೇಕು ಎಂದರು.
ಪರಿಸರಕ್ಕೆ ನಾವು ಅನಿವಾರ್ಯವಲ್ಲ, ಆದರೆ ನಮಗೆ ಪರಿಸರ ಅನಿವಾರ್ಯ. ನಮ್ಮ ಮುಂದಿನ ಪೀಳಿಗೆಯ ನೆಮ್ಮದಿ ಬದುಕಿಗೆ ಇರುವುದೊಂದು ಜೀವಗ್ರಹ ಈ ಭೂಮಿಯನ್ನು ಉಳಿಸಿಕೊಳ್ಳಬೇಕಿದೆ, ಪ್ಲಾಸ್ಟಿಕ್ ಮುಕ್ತ ಜಗತ್ತಿಗೆ ನಾವು ಸಹಕರಿಸೋಣ. ಅದರ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿಯ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸೋಮಣ್ಣ, ಕಾಲೇಜಿನ ಉಪಧ್ಯಕ್ಷರಾದ ಮಹಾದೇವ್, ಸದಸ್ಯರಾದ ಮಂಜುಳಾ, ಚೆಲುವ ನವೀನ್ ಮುಂತಾದವರು ಉಪಸ್ಥಿತರಿದ್ದರು.