ನವದೆಹಲಿ: ದೇಶದ ಪ್ರಜಾಪ್ರಭುತ್ವ, ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಗೆ ಅಪಾರ ಹಾನಿ ಮಾಡಿದ್ದೇ ಪ್ರಧಾನಿಯಾಗಿ 11 ವರ್ಷ ಪೂರ್ಣಗೊಳಿಸಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಧನೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಖರ್ಗೆ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಆರ್ ಎಸ್ ಎಸ್, ತಮ್ಮದೇ ಸ್ವಾಯತ್ತ ಆಡಳಿತದ ಮೂಲಕ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯ ಮೇಲೆ ದಾಳಿ ನಡೆಸಿ, ದುರ್ಬಲಗೊಳಿಸಿವೆ. ಹಿಂಬಾಗಿಲ ರಾಜಕೀಯದ ಮೂಲಕ ಅಥವಾ ಸರ್ವಾಧಿಕಾರದ ಮೂಲಕ ಸರ್ಕಾರಗಳನ್ನು ಉರುಳಿಸುವ ಮೂಲಕ ಈ 11 ವರ್ಷಗಳಲ್ಲಿ ರಾಜ್ಯಗಳ ಹಕ್ಕುಗಳನ್ನು ಕಡೆಗಣಿಸಲಾಗಿದೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಟೀಕಿಸಿದ್ದಾರೆ.
ಸಮಾಜದಲ್ಲಿ ದ್ವೇಷ, ಬೆದರಿಕೆ ಮತ್ತು ಭಯವನ್ನು ಹರಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಎಸ್ ಸಿ,ಎಸ್ ಟಿ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಅವರ ಮೀಸಲಾತಿ ಮತ್ತು ಸಮಾನತೆಯ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ ನಡೆಯುತ್ತಿದೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಬಿಜೆಪಿಯ ಆಡಳಿತ ವೈಫಲ್ಯಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಖರ್ಗೆ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಸರಾಸರಿ ಶೇ. 8 ರಷ್ಟಿದ್ದ ಜಿಡಿಪಿ ಬೆಳವಣಿಗೆ ದರವು ಶೇ 5–6ಕ್ಕೆ ಕುಸಿದಿದೆ. ಈ ಪರಿಯ ಕುಸಿತಕ್ಕೆ ಬಿಜೆಪಿ ಮತ್ತು ಆರ್ಎಸ್ಎಸ್ ನೀತಿಗಳೇ ಕಾರಣ. ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದ್ದು, ಇರುವ ಕೋಟ್ಯಂತರ ಉದ್ಯೋಗಗಳನ್ನೂ ಕಸಿದುಕೊಳ್ಳಲಾಗುತ್ತಿದೆ. ಹಣದುಬ್ಬರದ ಪರಿಣಾಮವಾಗಿ ಸಾರ್ವಜನಿಕ ಉಳಿತಾಯದ ಪ್ರಮಾಣವು 50 ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಆರ್ಥಿಕ ಅಸಮಾನತೆಯು 100 ವರ್ಷಗಳಲ್ಲೇ ಅತ್ಯಧಿಕವಾಗಿದೆ. ನೋಟು ರದ್ದತಿ ನಿರ್ಧಾರ, ದೋಷಪೂರಿತ ಜಿಎಸ್ ಟಿ, ಮುನ್ಸೂಚನೆ ಇಲ್ಲದ ಲಾಕ್ ಡೌನ್ ಜಾರಿಯ ಜೊತೆಗೆ ಅಸಂಘಟಿತ ವಲಯದ ಶೋಷಣೆಯು ಕೋಟ್ಯಂತರ ಕಾರ್ಮಿಕರ ಭವಿಷ್ಯವನ್ನು ಹಾಳುಮಾಡಿದೆ ಎಂದು ಅವರು ಆಪಾದಿಸಿದ್ದಾರೆ.
ಯುಪಿಎ ಸರ್ಕಾರದ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆಯ ಟೇಪ್ ಕತ್ತರಿಸಿದ್ದು ಬಿಟ್ಟರೆ, ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ನಮಾಮಿ ಗಂಗೆ, ಸ್ಮಾರ್ಟ್ ಸಿಟಿ ಯೋಜನೆಗಳೆಲ್ಲವೂ ಸಂಪೂರ್ಣವಾಗಿವೆ ಎಂದೂ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.