ಪಿರಿಯಾಪಟ್ಟಣ: ವಾಲ್ಮೀಕಿ ಜಗತ್ತಿಗೆ ಮಾನವೀಯತೆಯನ್ನು ನೀಡಿದ ಮಹಾಕವಿ ಎಂದು ಪ್ರಾಂಶುಪಾಲ ಪ್ರೊ.ನಂಜುಂಡಸ್ವಾಮಿ ಹರದನಹಳ್ಳಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಮಿತಿ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಾವಿರಾರು ವರ್ಷಗಳಿಂದ ರಾಮಾಯಣ ರಾಮ ಬದುಕಿದ್ದಾರೆ ಅಂದರೆ ಅದಕ್ಕೆ ಕಾರಣ ವಾಲ್ಮೀಕಿಯ ಪ್ರತಿಭೆ ಸೃಜನಶೀಲತೆ ಹಾಗೂ ಪ್ರಗತಿಪರವಾದ ಚಿಂತನೆಯಾಗಿದೆ, ರಾಮಾಯಣದಲ್ಲಿ ತ್ಯಾಗ ಸತ್ಯ ಪರಿಪಾಲನೆ ಸಹೋದರತ್ವ ಪ್ರೀತಿ ಶಾಂತಿಯಂತಹ ನೈತಿಕ ಮೌಲ್ಯವನ್ನು ವಾಲ್ಮೀಕಿ ಅವರು ತಮ್ಮ ಕಾವ್ಯದ ಪಾತ್ರಗಳಲ್ಲಿ ಕಟ್ಟಿಕೊಟ್ಟಿದ್ದಾರೆ, ಹುಟ್ಟಿಗಿಂತ ಜ್ಞಾನ ಮುಖ್ಯ ಜಾತಿಗಿಂತ ನಡೆ ನುಡಿ ಗುಣ ಮುಖ್ಯವೇ ಹೊರತು ಜಾತಿಯಿಂದ ಭಾರತ ದೇಶದ ಯಾವ ಮಹಾತ್ಮರು ಕವಿಗಳು ನೇತಾರರನ್ನು ನೋಡಬಾರದು, ವಾಲ್ಮೀಕಿಯನ್ನು ಮರೆತರೆ ಭಾರತವನ್ನು ಮರೆತಂತೆ ಎಂದರು.
ಸಂಪನ್ಮೂಲ ವ್ಯಕ್ತಿ ಎನ್. ನಂಜುಡಸ್ವಾಮಿ ಅವರು ಮಾತನಾಡಿ, ರಾಮಾಯಣದ ಮೂಲಕ ವಾಲ್ಮೀಕಿ ಅವರು ಭಾತೃತ್ವ ಮಾತೃತ್ವ ಪಿತೃತ್ವ ಹಾಗೂ ರಾಜನೀತಿಯನ್ನು ಕಟ್ಟಿಕೊಟ್ಟಿದ್ದಾರೆ, ಭಾರತ ದೇಶದ ಪ್ರತಿಭಾ ಸಂಪನ್ನರು ವಾಲ್ಮೀಕಿ ಮತ್ತು ವ್ಯಾಸರು, ಈ ದೇಶದ ಪ್ರಾತಿನಿಧಿಕ ಪರಂಪರೆಯ ಸಂಕೇತ ವಾಲ್ಮೀಕಿ, ನಾವು ದಾರ್ಶನಿಕರ ಪ್ರತಿಮೆಗಿಂತ ಪ್ರತಿಭೆಯನ್ನು ಗೌರವಿಸಿ ಅವರ ತತ್ವ ಚಿಂತನೆಗಳನ್ನ ಮೈಗುಡಿಸಿಕೊಳ್ಳಬೇಕು ಯಾವ ವ್ಯಕ್ತಿ ತತ್ವದಿಂದ ಬದುಕುತ್ತಾರೋ ಮುಂದೆ ಅವರು ದೈವತ್ವಕ್ಕೇರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಕೆ.ಜಿ ಮಂಜುನಾಥ್, ಸಿ.ಆರ್ ವಿಶ್ವನಾಥ್, ಸಾಗರ್, ಸ್ವಾತಿ, ರೂಪಾ, ಡಾ.ಶೈಲಶ್ರೀ, ಗ್ರಂಥಪಾಲಕರಾದ ರಮೇಶ್, ಅತಿಥಿ ಉಪನ್ಯಾಸಕರಾದ ಅನಿತಾ, ಸಂಗಮೇಶ್, ಶಿವಣ್ಣ ಮತ್ತು ವಿದ್ಯಾರ್ಥಿಗಳು ಇದ್ದರು.