ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ವಿವಿಧ ಕಾಮಗಾರಿ ಹಾಗೂ ಜಲಾಭಿಮುಖ ಯೋಜನೆಯಲ್ಲಿ ಹಲವು ನ್ಯೂನತೆ ಹಾಗೂ ಅಕ್ರಮ ನಡೆದಿರುವ ಸಾಧ್ಯತೆಯಿದೆ. ಇದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ – ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಕೆ.ವಿಶುಕುಮಾರ್ ಆಗ್ರಹಿಸಿದ್ದಾರೆ.
ಮಂಗಳೂರು ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರಾವತಿ ನದಿ ಬದಿ ಜಲಾಭಿಮುಖ ಯೋಜನೆಯ 2.1 ಕಿ.ಮೀ. ಉದ್ದ ರಸ್ತೆಗೆ 70 ಕೋಟಿ ಮೀಸಲಿಟ್ಟಿರುವ ಬಗ್ಗೆ ಸಚಿವ ಬೈರತಿ ಸುರೇಶ್ ಅಚ್ಚರಿ ವ್ಯಕ್ತಪಡಿಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿ ಒಂದೂವರೆ ತಿಂಗಳೆ ಕಳೆದಿದೆ. ಆದರೂ ಕಾಮಗಾರಿಯನ್ನು ಸ್ಥಗಿತಗೊಳಿಸಿರುವ ಯಾವುದೇ ಲಕ್ಷಣ ಕಾಣುತ್ತಿಲ್ಲ ಎಂದರು.
ಸೀಮಾ ಮಡಿವಾಳ ಮಾತನಾಡಿ, ಜಲಾಭಿಮುಖ ಯೋಜನೆಯಲ್ಲಿ ಸಿಆರ್ಝಡ್ ಉಲ್ಲಂಘನೆ, ಕಾಂಡ್ಲಾವನಗಳ ನಾಶ, ನದಿ ತೀರದ ಒತ್ತುವರಿ, ನದಿಗಳಿಗೆ ಕೊಳಚೆ ನೀರು ಬಿಡುತ್ತಿರುವುದು ಕಂಡುಬಂದಿದೆ. ಪಾಲಿಕೆಯ ಆಡಳಿತ, ಪ್ರತಿಪಕ್ಷದವರು ಇದನ್ನು ಪ್ರಶ್ನಿಸುತ್ತಿಲ್ಲ. ಹೀಗಾಗಿ ಸರಕಾರ ಈ ಬಗ್ಗೆ ತನಿಖೆ ನಡೆಸಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿವೇಕಾನಂದ ಸಾಲಿನ್ಸ್, ಶನೋನ್ ಲಾರೆನ್ಸ್ ಪಿಂಟೊ, ಕಬೀರ್ ಉಪಸ್ಥಿತರಿದ್ದರು.