ಕಲಬುರಗಿ : ಪ್ರಿಯಾಂಕ್ ಖರ್ಗೆ ಇನ್ನೂ ಎಳಸು, ಅವರ ತಂದೆ ಕಾರಣಕ್ಕೆ ಮಂತ್ರಿಯಾಗಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಯಾಕೆ ಈ ಸರ್ಕಾರಕ್ಕೆ ಹಿಂದುಳಿದವರು, ದಲಿತರು ನೆನಪಿಗೆ ಬರಲಿಲ್ವಾ? ಈ ಸರ್ಕಾರ ಕೇವಲ ಮುಸ್ಲಿಮರಿಗೋಸ್ಕರ ಇದ್ದೀವಿ ಅನ್ನೋ ಥರ ಇದೆ. ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಬ್ಯಾನ್ ಮಾಡೇ ಬಿಡುತ್ತೇವೆ ಅನ್ನೋ ರೀತಿ ಮಾತನಾಡ್ತಾರೆ. ಪ್ರಿಯಾಂಕ್ ಖರ್ಗೆ ಇನ್ನೂ ಎಳಸು, ಅವರಪ್ಪನ ಕಾರಣಕ್ಕೆ ಮಂತ್ರಿಯಾಗಿದ್ದಾರೆ. ಇಂದಿರಾ, ನೆಹರೂ ಕೈಯಲ್ಲಿ ಆರ್ಎಸ್ ಎಸ್ ಬ್ಯಾನ್ ಮಾಡೋಕೆ ಆಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ರಾಜ್ಯದ ಮುಸ್ಲಿಮರ ಮನಸ್ಥಿತಿ ಬದಲಾಗಬೇಕು. ಇಲ್ಲದಿದ್ದರೆ ಅವರು ಖಂಡಿತ ತೊಂದರೆ ಅನುಭವಿಸಬೇಕಾಗುತ್ತೆ. ಬಾಗಲಕೋಟೆಯಲ್ಲಿ ಕಲ್ಲು ತೂರಾಟ ಆಗುತ್ತೆ. ಖುದ್ದು ಅಲ್ಲಿನ ಎಸ್ಪಿ ಮೇಲೆ ಕಲ್ಲು ತೂರಾಟವಾಗಿದೆ. ಯಾಕಂದ್ರೆ ಸರ್ಕಾರ ಅವರ ಬೆನ್ನಿಗೆ ನಿಂತಿದೆ ಅಂತ. ಇಷ್ಟಾದ್ರು ಸರ್ಕಾರ ಬಜೆಟ್ನಲ್ಲಿ ಮೀಸಲಿಡುತ್ತಿದೆ. ಹುಬ್ಬಳ್ಳಿ, ಕಲಬುರಗಿಯಲ್ಲಿ ಹಜ್ ಭವನ ಘೋಷಣೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಇರಾನ್-ಇಸ್ರೇಲ್ ಯುದ್ಧದಿಂದ ನಮಗೆ ಸಂಕಷ್ಟದ ಸಮಯ. ಸಂಕಷ್ಟದ ಸಮಯದಲ್ಲಿ ಇಡೀ ದೇಶ ಒಂದಾಗಬೇಕು. ಆದರೆ, ಕಾಂಗ್ರೆಸ್ ಆರೋಪ ಮಾಡ್ತಿದ್ದಾರೆ. ಹಿರಿಯರಾದ ಖರ್ಗೆಯವರು ಈ ರೀತಿ ಹೇಳಿಕೆ ಕೊಡಬಾರದು. ವಕ್ಫ್ ಆಸ್ತಿ ಮುಸ್ಲಿಮರಿಂದಲೇ ಅತಿಕ್ರಮಣ ಆಗಿದೆ ಅಂತ ಖುದ್ದು ಜಮೀರ್ ಹೇಳ್ತಾರೆ ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಸ್ಪೀಕರ್ ಸಭಾತ್ಯಾಗ ಮಾಡಿದ್ದು ಇದೇ ಮೊದಲು. ಇದು ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ. ಇದರಿಂದ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಹಿಂದುತ್ವ ಉಳಿಯಬೇಕು. ಅದಕ್ಕಾಗಿ ರಾಜ್ಯದ ಜನ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಯಾವನ ಕೈಯಿಂದಲೂ ನನ್ನ ಹೆಸರನ್ನ ಅಳಿಸಿ ಹಾಕೋಕೆ ಆಗಲ್ಲ. ರಾಜ್ಯದಲ್ಲಿ ಸಾಮೂಹಿಕ ನಾಯಕತ್ವ ಇರಬೇಕು ಅನ್ನೋದು ನಮ್ಮ ಬೇಡಿಕೆ. ಬಿಜೆಪಿ ಯಾರೋ ನಾಲ್ಕು ಜನ ಕಟ್ಟಿದ ಪಕ್ಷವಲ್ಲ. ಒಂದು ಸಂದರ್ಭಕ್ಕೋಸ್ಕರ ಕಾಯುತ್ತಿದ್ದೇವೆ. ಆ ಸಂದರ್ಭದಲ್ಲಿ ಬಿಜೆಪಿಗೆ ಮತ್ತೆ ಸೇರ್ಪಡೆಯಾಗುತ್ತೇನೆ. ಯತ್ನಾಳ್ ಹೊಸ ಪಕ್ಷ ಸ್ಥಾಪಿಸಿದ್ರೂ ನಾನು ಹೋಗಲ್ಲ. ನನ್ನ ರಕ್ತದಲ್ಲಿಯೇ ಬಿಜೆಪಿ ಇದೆ. ನಾನು ಬಿಜೆಪಿ ಪಕ್ಷ ಬಿಟ್ಟು ಬೇರೆ ಕಡೆ ಹೋಗಲ್ಲ. ಕುಟುಂಬ ರಾಜಕಾರಣಕ್ಕೆ ನನ್ನ ವಿರೋಧವಿದೆ. ನನ್ನ ಮಗನಿಗೆ ಟಿಕೆಟ್ ಕೊಡುವ ಬಗ್ಗೆ ಈಗ ಮಾತನಾಡಲ್ಲ. ನಾವು ರಾಜಕೀಯ ಸನ್ಯಾಸತ್ವ ಪಡೆದಿಲ್ಲ ಎಂದು ಮಾತನಾಡಿದರು.



