ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ‘ಸಂಸ್ಕಾರ ಇಲ್ಲದ ಮೆಂಟಲ್’ ನಂತೆ ಮಾತನಾಡುತ್ತಾರೆ ಎಂದು ಶಾಸಕ ಲಕ್ಷ್ಮಣ ಸವದಿ ಗುಡುಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮನೆಯಲ್ಲಿ ತಂದೆ, ತಾಯಿ, ಗುರು, ಹಿರಿಯರು ಸಂಸ್ಕಾರ ಕಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಮೆಂಟಲ್ ತರ ಮಾತನಾಡಿದರೆ ಜನರು ತಮಗೂ ಹಾಗೆ ಎನ್ನುತ್ತಾರೆ. ಅವರ ಆರೋಪಗಳಿಗೆ ಸೂಕ್ತ ವೇದಿಕೆಯಲ್ಲಿ ಉತ್ತರ ನೀಡುವುದಾಗಿ ಸವದಿ ಸವಾಲ್ ಹಾಕಿದರು.
ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಅಥಣಿ ಜನ ತಿರಸ್ಕರಿಸಿದ್ದಾರೆ. ಕಳೆದ 2023ರ ವಿಧಾನಸಭಾ ಚುನಾವಣೆ ಹಾಗೂ ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಅಥಣಿ ಜನ ಸ್ಪಷ್ಟ ತಿರಸ್ಕಾರ ತೋರಿದ್ದಾರೆ. ಆದರೂ ಅವರಿಗೆ ಸಂಸ್ಕಾರವಿಲ್ಲ, ಅಥಣಿಗೆ ಬರುವುದು ಮೂರ್ಖತನದ ಪರಮಾವಧಿ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಅಥಣಿ ತಾಲೂಕಿನ ಜನ ಬುದ್ದಿವಂತರಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ಬುದ್ದಿ ಕಲಿಯಬೇಕಿಲ್ಲ. ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮಾತಾಡುವ ಸಂಸ್ಕೃತಿ ನಮ್ಮದಲ್ಲ. ಅಥಣಿ ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ನಮ್ಮ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.



