ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ದುರಂತ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಉಂಟುಮಾಡಿದೆ. ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ದುರ್ಘಟನೆ 11 ಅಮೂಲ್ಯ ಜೀವಗಳನ್ನು ಕಸಿದುಕೊಂಡಿದ್ದು, ಇದೀಗ ಸರ್ಕಾರದ ನಿರ್ಲಕ್ಷ್ಯ ಮತ್ತು ಅಧಿಕಾರದ ದುರುಪಯೋಗ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಮಾನವ ಹಕ್ಕುಗಳ ಹೋರಾಟ ಸಂಸ್ಥೆ ‘ಸಿಟಿಜನ್ ರೈಟ್ಸ್ ಫೌಂಡೇಶನ್ (CRF)’ ರಾಜ್ಯಪಾಲರಿಗೆ ಸಲ್ಲಿಸಿದ ದೂರಿನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಈ ದುರಂತದ ನೇರ ಹೊಣೆಗಾರರು ಎಂದು ಆರೋಪಿಸಲಾಗಿದೆ. ಪೊಲೀಸ್ ಇಲಾಖೆ ಮತ್ತು ಆಡಳಿತ ಇಲಾಖೆಯ ಮುಂಜಾನೆ ಎಚ್ಚರಿಕೆಯನ್ನು ಲೆಕ್ಕಿಸದೆ ಈ ಸಮಾರಂಭಕ್ಕೆ ಅವಕಾಶ ನೀಡಿದ್ದು, ಮಾರಣಹೋಮಕ್ಕೆ ದಾರಿ ಮಾಡಿಕೊಟ್ಟಿದೆ ಎಂದು CRF ಹೇಳಿದೆ.
CRF ಅಧ್ಯಕ್ಷ ಕೆ.ಎ.ಪಾಲ್ ನೇತೃತ್ವದ ತಂಡ ರಾಜಭವನಕ್ಕೆ ಭೇಟಿ ನೀಡಿ, ರಾಜ್ಯ ಸರ್ಕಾರವನ್ನು ತನಿಖೆ ಮುಗಿಯುವವರೆಗೂ ಅಮಾನತಿನಲ್ಲಿಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. FIR ದಾಖಲಾಗುತ್ತಿದ್ದಂತೆಯೇ, ತಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಸರ್ಕಾರ ತನಿಖೆಗೆ ಅಡ್ಡಿಯಾಗಲು ಹೊರಟಿದೆ ಎಂಬ ಆರೋಪವೂ ಕೇಳಿಬಂದಿದೆ.
ಸಿದ್ದರಾಮಯ್ಯ ಅವರೇ ಡಿಪಿಎಆರ್ ಇಲಾಖೆಯ ಸಚಿವರಾಗಿದ್ದು, ಆ ಇಲಾಖೆ ತಾನೇ ಆಕ್ಷೇಪ ವ್ಯಕ್ತಪಡಿಸಿದ್ದರೂ ಕೂಡ ಸಮಾರಂಭ ನಡೆಯಿತು. ಸರ್ಕಾರದ ಹಿರಿಯ ಸಚಿವರು ಈ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದನ್ನು ಭಾರೀ ಪ್ರಚಾರ ಪಡೆದ ಸಮಾರಂಭವನ್ನಾಗಿ ರೂಪಿಸಿದರು. ಈ ಕಾರಣದಿಂದ ಲಕ್ಷಾಂತರ ಜನರು ಕ್ರೀಡಾಂಗಣದ ಬಳಿ ಸೇರಿದ್ದು, ಮುಂದಾಗಿ ದುರಂತಕ್ಕೆ ಕಾರಣವಾಯಿತು.
CRF, ‘ಪುಷ್ಪ-2’ ಚಿತ್ರ ಬಿಡುಗಡೆ ವೇಳೆ ತೆಲಂಗಾಣದಲ್ಲಿ ನಡೆದ ಸಮಾನ ಘಟನೆಗೆ ವಿರುದ್ಧವಾಗಿ ಕ್ರಮ ತೆಗೆದುಕೊಂಡ ಸರ್ಕಾರ, ಬೆಂಗಳೂರು ದುರಂತದಲ್ಲಿ ಸಚಿವರನ್ನು ಬದಲಾಯಿಸದಿರುವುದನ್ನು ಪ್ರಶ್ನಿಸಿದೆ. ಅಲ್ಲು ಅರ್ಜುನ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದರೆ, ಈ ಪ್ರಕರಣದಲ್ಲಿ ಸಚಿವರ ವಿರುದ್ಧ ಯಾವ ಕ್ರಮವೂ ಇಲ್ಲವೆಂಬುದನ್ನು ಸಮಾನತೆಯ ಕೊರತೆ ಎಂದು ಚುಡಾಯಿಸಿದೆ.
ಅದೇ ರೀತಿ KSCA ಅಧಿಕಾರಿಗಳು ಅಕ್ರಮವಾಗಿ ಟಿಕೆಟ್ ಹಂಚಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದೂ ಬೆಳಕಿಗೆ ಬಂದಿದೆ. CRF ಹೇಳುವಂತೆ, ಇದು ಸರ್ಕಾರದ ತೀವ್ರ ನಿರ್ಲಕ್ಷ್ಯ ಮತ್ತು ಖಾಸಗಿ ಸಂಸ್ಥೆಗಳ ಲಾಭಕ್ಕಾಗಿ ಅಧಿಕಾರ ದುರುಪಯೋಗ ಮಾಡುವ ವರ್ತನೆಯಾಗಿದೆ. FIR ತಡವಾಗಿ ದಾಖಲಾಗಿದ್ದು, ತನಿಖೆಗೆ ಅಡ್ಡಿಯಾಗಿ ಸಮಾರಂಭಕ್ಕೆ ಹೊಣೆಗಾರರ ಮೇಲೆ ತಪ್ಪು ಹೊರೆ ತರುವ ಪ್ರಯತ್ನ ನಡೆಸಲಾಗಿದೆ.
ಒಟ್ಟಾರೆ ಘಟನಾವಳಿಗಳನ್ನು ಗಮನಿಸಿದರೆ ಮಧ್ಯ ತಯಾರಿಕಾ ಕಂಪನಿಯ ಲಾಭಿಗೆ ಮಣಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಖಾಸಗಿ ಸಂಸ್ಥೆಯ ಸಮಾರಂಭಕ್ಕೆ ಪೊಲೀಸರ ಆಕ್ಷೇಪದ ಹೊರತಾಗಿಯೂ ನಿಯಮ ಬಾಹಿರವಾಗಿ ಅವಕಾಶ ಮಾಡಿಕೊಟ್ಟಿದ್ದಾರೆ. KSCA ಅಧಿಕಾರಿಗಳು ಅಕ್ರಮವಾಗಿ ಟಿಕೆಟ್ ಹಂಚಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದು ಸಿಎಂ ಹಾಗೂ ಡಿಸಿಎಂ ಅವರು ಅಧಿಕಾರ ದುರುಪಯೋಗಪಡಿಸಿ ಆಡಳಿತ ಯಂತ್ರವನ್ನು ಅನಧಿಕೃತವಾಗಿ ಖಾಸಗಿ ಸಂಸ್ಥೆಯ ಅಕ್ರಮಗಳಿಗೆ ಬಳಸಿಕೊಂಡಿದ್ದಾರೆ. ತಮ್ಮ ಈ ಅಪರಾಧ ಸಂಚನ್ನು ಮರೆಮಾಚುವ ಸಂಚಿನ ಭಾಗವಾಗಿ ತಕ್ಷಣವೇ FIR ಮಾಡದಂತೆ ತಡೆದಿದ್ದಾರೆ. ಘಟನೆ ನಡೆದ ಒಂದು ದಿನದ ನಂತರ FIR ದಾಖಲಾಗಿದ್ದು, ತಮ್ಮ ಮೇಲೆಯೂ ನಿಷ್ಟೂರ ಕ್ರಮ ಅನುಸರಿಸಬಲ್ಲ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಗಮನಿಸಿದರೆ ಈ ಪ್ರಕರಣ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಯುವುದು ಅನುಮಾನ. ಹಾಗಾಗಿ ತನಿಖೆ ಪೂರ್ಣಗೊಳ್ಳುವ ವರೆಗೂ ರಾಜ್ಯಸರ್ಕಾರವನ್ನು ಅಮಾನತಿನಲ್ಲಿಡಬೇಕಿದೆ ಎಂಬ ಕಾನೂನು ಸಲಹೆಯನ್ನೂ CRF ರಾಜ್ಯಪಾಲರ ಮುಂದಿಟ್ಟಿದೆ.