ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಇಂದು ಗುಜರಾತಿನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಆರ್ಸಿಬಿ ಗೆಲುವಿಗಾಗಿ ಕರ್ನಾಟಕದಾದ್ಯಂತ ಅಭಿಮಾನಿಗಳು ಹಾರೈಕೆ ಹಾಗೂ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಬೆಂಗಳೂರು ನಗರದಲ್ಲಿ ಸಂಭ್ರಮಾಚರಣೆ ವೇಳೆ ಯಾವುದೇ ಅವಾಂತರ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಬೇಕೆಂದು ಪೊಲೀಸ್ ಕಮಿಷನರ್ ದಯಾನಂದ್ ಸೂಚಿಸಿದ್ದಾರೆ. ಡಿಸಿಪಿ, ಎಸಿಪಿಗಳಿಗೂ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ರಸ್ತೆ ತಡೆಯುವುದು, ವಾಹನಗಳಿಗೆ ಅಡ್ಡಿಯಾಗುವುದು, ಟೈರ್ಗೆ ಬೆಂಕಿ ಹಾಕುವುದು ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟುಮಾಡುವ ಯಾವುದೇ ವರ್ತನೆಗಳನ್ನು ತಡೆಯುವಂತೆ ಪೊಲೀಸರು ಎಚ್ಚರಿಸಿದ್ದಾರೆ. ಎಂ.ಜಿ. ರಸ್ತೆ, ಕೋರಮಂಗಲ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ನಿಗಾ ಬಿಗಿಗೊಳಿಸಲಾಗಿದೆ.
ಪಬ್, ಕ್ಲಬ್, ರೆಸ್ಟೋರೆಂಟ್ಗಳು ನಿಗದಿತ ಸಮಯದೊಳಗೆ ಬಂದ್ ಆಗಬೇಕೆಂದು ಸೂಚನೆ ನೀಡಲಾಗಿದೆ. ಸ್ಕ್ರೀನ್ ಅಳವಡಿಕೆಗಳಿಗೆ ಪೊಲೀಸರ ಅನುಮತಿ ಅಗತ್ಯವಿದೆ. ಎಲ್ಲೆಡೆ ಹೊಯ್ಸಳ ಹಾಗೂ ಬೀಟ್ ಪೊಲೀಸರು ಗಸ್ತು ಬಿಗಿಗೊಳಿಸಿದ್ದಾರೆ.