ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು, ಮಂಡ್ಯ, ಶ್ರೀರಂಗಪಟ್ಟಣ, ಕೆ.ಆರ್.ಎಸ್ ನಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಕೆ.ಆರ್.ಎಸ್ ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಧರಣಿ ನಡೆಸಿದ್ದು, ಮಂಡ್ಯದಲ್ಲಿ ರೈತರು ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಶ್ರೀರಂಗಪಟ್ಟಣದಲ್ಲಿ ರೈತ ಹೋರಾಟಗಾರ ನಂಜುಂಡೇಗೌಡ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಡ್ಯದ ಡಿಸಿ ಕಚೇರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ-ರಾಜ್ಯ ಸರ್ಕಾರ ಹಾಗೂ ಕಾವೇರಿ ನೀರಾವರಿ ನಿಗಮದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ರೈತ ಸಂಘ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ್, ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ. ನಮ್ಮದು ನಮ್ಮದು ಕಾವೇರಿ ನಮ್ಮದು ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ.ಆರ್.ಎಸ್ ಡ್ಯಾಂ ನಿಂದ ಕೇಂದ್ರ-ರಾಜ್ಯಸರ್ಕಾರ ಸೇರಿ ತಮಿಳುನಾಡಿಗೆ ನೀರು ಹರಿಸಿದ್ದಾರೆ. 15 ಸಾವಿರ ಕ್ಯೂಸೆಕ್ ನೀರನ್ನು ಬಿಟ್ಟು ನಮ್ಮ ರೈತರನ್ನ ಕಡೆಗಣಿಸಿದ್ದಾರೆ. ಬರಿ 2 ಸಾವಿರ ಕ್ಯೂಸೆಕ್ ನೀರನ್ನು ನಾಲೆ ಬಿಟ್ಟು ರೈತರಿಗೆ ಅನ್ಯಾಯ ಮಾಡ್ತಿದ್ದಾರೆ. ಕೆರ್ ಎಸ್ ಡ್ಯಾಂ ನಿರ್ವಹಣೆ ನಮ್ಮದು, ತಿಂಗಳಿಗೆ 3 ಕೋಟಿ ವೆಚ್ಚದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ತಮಿಳುನಾಡಿನವರು ಒಂದು ಪೈಸೆ ಕೊಟ್ಟಿಲ್ಲ. ಕೋರ್ಟ್ ನಲ್ಲಿ ಯಾವ ರೀತಿ ವಾದ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾಲೆಗಳಿಗೆ 2 ಸಾವಿರ ಕ್ಯೂಸೆಕ್ ನೀರು ಬಿಡದೆ ತಮಿಳುನಾಡಿಗೆ ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ದೊಂಬರಾಟ ಆಡುತ್ತಾ ನಿಂತಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ ರೈತರನ್ನು ಕೋರ್ಟ್ ಗೆ ಹೋಗಿ ಅಂತಾರೆ. ರೈತರು ಕೋರ್ಟ್ ಗೆ ಹೋಗುವುದಕ್ಕೆ ಆಗುತ್ತಾ? ಇವರು ಯಾಕೆ ಇರೋದು ಎಂದು ಪ್ರಶ್ನಿಸಿದರು.
ಉಪಮುಖ್ಯಮಂತ್ರಿ ಒಬ್ಬ ಕಳ್ಳ. ಅವರು ಮಾಡಬೇಕಾದ ಕೆಲಸ. ಉಸ್ತುವಾರಿ ಸಚಿವ ಬೆಳೆ ಹಾಕಬೇಡಿ ಅಂತಾರೆ ಸಾಲವನ್ನು ಇವರ ಅಪ್ಪ ಕಟ್ಟುತ್ತಾರಾ? ನೀರು ಕೊಡದಿದ್ದರೆ ಸಾಲ ಮನ್ನ ಮಾಡಿ ಎಂದು ಹರಿಹಾಯ್ದರು.
ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆದು ಹೋರಾಟ ಮಾಡ್ತೇವೆ. ತಕ್ಷಣವೇ ತಮಿಳುನಾಡಿಗೆ ನೀರು ಹರಿಸುವುದನ್ನ ನಿಲ್ಲಿಸಿ. ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲೆಗೆ ನೀರು ಬಿಡಿ. ಜಿಲ್ಲೆಯ ಜನಪ್ರತಿನಿಧಿಗಳು ಎಚ್ಚೆತ್ತು ತಮಿಳುನಾಡಿಗೆ ನೀರು ಹೋಗುವುದನ್ನ ತಡೆಯಿರಿ ಇಲ್ಲ ನಿಮ್ಮ ವಿರುದ್ಧವೂ ಹೋರಾಟ ಮಾಡುತ್ತೇವೆ ಎಂದು ಡಿಸಿಎಂ, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಜನ ಪ್ರತಿನಿಧಿಗಳಿಗೆ ಇಂಡವಾಳು ಚಂದ್ರಶೇಖರ್ ಎಚ್ಚರಿಕೆ ನೀಡಿದರು
