ಯಳಂದೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಬಿಳಿಗಿರಿರಂಗನಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ವಡಗೆರೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಶಿಕ್ಷಕರು ತರಗತಿಗಳಲ್ಲಿ ಶುಕ್ರವಾರ ಕಪ್ಪು ಪಟ್ಟಿಧರಿಸಿ ಪಾಠ ಪ್ರವಚನ ಮಾಡುವ ಮೂಲಕ ಪ್ರತಿಭಟಿಸಿದರು.
ರಾಜ್ಯದಲ್ಲಿ ಒಟ್ಟು ೮೨೩ ವಸತಿ ಶಾಲೆಗಳನ್ನು ಒಳಗೊಂಡಿದ್ದು, ಆದರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್ ವಸತಿ ಶಾಲೆ ಸೇರಿದಂತೆ ಸುಮಾರು ೨೦ ವಸತಿ ಶಾಲೆಗಳನ್ನು ಒಳಗೊಂಡಿದೆ. ಸುಮಾರು ೧೩೦ ಕ್ಕು ಹೆಚ್ಚು ನೌಕರರು ಇಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಮೇ ೩೦ರಂದು ತರಗತಿಯಲ್ಲಿ ಕಪ್ಪುಪಟ್ಟಿ ಧರಿಸಿ ಅಸಹಕಾರ ವ್ಯಕ್ತಪಡಿ ಸಲಾಗುವುದು. ಮೇ ೩೧ ರಂದು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಈಗಾಗಲೇ ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಜೂನ್ ೨ ರಿಂದವಸತಿ ಶಾಲೆಗಳ ಮುಂಭಾಗ ಧರಣಿ ಸತ್ಯಾಗ್ರಹ ಕೈಗೊಳ್ಳಲೂ ಕೂಡ ಇವರು ತಯಾರಿ ನಡೆಸಿಕೊಂಡಿದ್ದಾರೆ.
ಈ ಹಿಂದೆಯೇ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರಿನಲ್ಲಿ ಮೇ ೨೬ ರಿಂದ ೨೮ ರವರೆಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ಸಹ ಮಾಡಲಾಯಿತು.
ವಸತಿ ಶಾಲೆಗಳ ನಿರ್ವಹಣೆಗೆ ವಸತಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು. ಅಲ್ಲದೆ ಮರಣ ಮತ್ತು ನಿವೃತ್ತಿ ಉಪದಾನ (ಡಿಸಿಆರ್ಜಿ) ಸೌಲಭ್ಯಕ್ಕೆ ಅನುಮೋದನೆ ನೀಡಬೇಕು. ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ನಮಗೂ ಜಾರಿ ಮಾಡಬೇಕು. ಉಚಿತ ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕು. ವಸತಿ ಶಿಕ್ಷಕರು ಹೆಚ್ಚು ಕಾಲ ಶಾಲೆಯಲ್ಲೇ ಇರುವುದರಿಂದ ಹೆಚ್ಚಿನ ವೇತನವನ್ನು ನೀಡಬೇಕು. ವಿಶೇ ಭತ್ಯೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.
ಮುಖ್ಯ ಶಿಕ್ಷಕ ಕುಮಾರಸ್ವಾಮಿ, ಬಸವಣ್ಣ, ಶಿಕ್ಷಕರಾದ ಸುನೀಲ್ಕುಮಾರ್, ಜ್ಞಾನೇಂದ್ರಸ್ವಾಮಿ, ನಳಿನಾ, ತ್ಯಾಗರಾಜು, ನಾಗರಾಜು, ಶಶಿಧರ್, ನಂದೀಶ್ ಸೇರಿದಂತೆ ಅನೇಕರು ಇದ್ದರು.