Thursday, March 12, 2026
Google search engine

Homeರಾಜ್ಯಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಸ್ಥಗಿತ: ಪುನಾರಂಭ ಸಮರ್ಥಿಸಿಕೊಂಡ ಸಚಿವ ಈಶ್ವರ ಖಂಡ್ರೆ

ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಸ್ಥಗಿತ: ಪುನಾರಂಭ ಸಮರ್ಥಿಸಿಕೊಂಡ ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಕಳೆದ ನವೆಂಬರ್ ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತುಬದ್ಧವಾಗಿ ಪುನಾರಂಭ ಮಾಡಿರುವುದನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಫಾರಿ ಸ್ಥಗಿತಗೊಳಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದರು. ಸಫಾರಿ ದೇಶಾದ್ಯಂತ ಹಲವು ವರ್ಷಗಳಿಂದ ನಡೆಯುತ್ತಿದೆ. ಒಂದು ಸಮೀಕ್ಷೆಯನ್ನೂ ನಡೆಸದೆ ಸಫಾರಿಯನ್ನು ಏಕಾಏಕಿ ನಿಲ್ಲಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು, ಸಫಾರಿಯನ್ನು ಏಕಾಏಕಿ ನಿಲ್ಲಿಸಲಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ ಮೂರು ಅಮೂಲ್ಯ ಜೀವಹಾನಿ ಆಗಿತ್ತು, ಒಬ್ಬರು ಶಾಶ್ವತವಾಗಿ ಅಂಗವಿಕಲರಾದರು, ಹುಲಿಗಳು ಕಾಡಿನಿಂದ ಹೊರಗೆ ಬಂದು ದಾಳಿ ಮಾಡುತ್ತಿದ್ದವು. ಜನರ ಅಮೂಲ್ಯ ಜೀವ ರಕ್ಷಣೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದರು.

ನವೆಂಬರ್ ನಲ್ಲಿ ತಾವು ಚಾಮರಾಜನಗರದಲ್ಲಿ ಈ ಸಂಬಂಧ ಸಭೆ ನಡೆಸಿದಾಗ ಹಲವು ರೈತ ಸಂಘಟನೆಗಳು ಸಫಾರಿ ರಾತ್ರಿಯವರೆಗೂ ನಡೆಯುತ್ತಿದೆ. ಹೆಚ್ಚಿನ ವಾಹನಗಳ ಸಂಚಾರ ಇದೆ. ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ ಇದರಿಂದ ವಿಚಲಿತವಾಗಿ ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿದ್ದು ಸಫಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು. ಮನವಿ ನೀಡಿದ್ದರು. ಈ ಮಧ್ಯೆ ತಾವು ಬೀದರ್ ನಲ್ಲಿದ್ದಾಗ ಒಂದು ವಾರದ ಅಂತರದಲ್ಲಿ ಮತ್ತೊಂದು ಹುಲಿದಾಳಿ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಿಬ್ಬಂದಿ ಮತ್ತು ವಾಹನವನ್ನು ಕಾಡಿನಂಚಿನ ಗ್ರಾಮದಲ್ಲಿ ನಿಗಾ ಇಡಲು ಬಳಸಲಾಯಿತು ಎಂದು ತಿಳಿಸಿದರು.

ಬಂಡೀಪುರದಲ್ಲಿ 314 ಕಿ.ಮೀ. ಗಡಿ ಇದೆ. ಅದರಲ್ಲಿ 100 ಕಿಮೀ ಗಡಿ ಹೆಚ್ಚಿನ ಸಂಘರ್ಷ ಪ್ರದೇಶವಾಗಿದೆ. ಆ ಪ್ರದೇಶದಲ್ಲಿ 25 ಕಳ್ಳಬೇಟೆ ನಿಗ್ರಹ ಶಿಬಿರ ಸ್ಥಾಪಿಸಿ, ಸಿಬ್ಬಂದಿ ನೇಮಿಸಿ ಅವರಿಂದ 14 ಗಂಟೆ ಗಸ್ತು ಹಾಕಲು ಸೂಚಿಸಲಾಯಿತು. ಸಮಗ್ರ ಕಮಾಂಡ್ ಸೆಂಟರ್ ಕಾರ್ಯಾರಂಭ ಮಾಡಿಸಲಾಯಿತು. ಮುಂದೆ ಅನಾಹುತ ನಡೆಯದಂತೆ ಎಲ್ಲ ಪೂರ್ವಸಿದ್ಧತೆ ಮಾಡಿಕೊಂಡ ಬಳಿಕ ಸಫಾರಿ ಪುನಾರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮಿಗಿಲಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕೇಂದ್ರ ವನ್ಯಜೀವಿ ಸಂಸ್ಥೆಯ ಪ್ರತಿನಿಧಿಯನ್ನೂ ಒಳಗೊಂಡ ತಜ್ಞರ ಸಮಿತಿ ರಚಿಸಿ, ಆ ತಜ್ಞರ ಸಮಿತಿಯ ಪ್ರಾಥಮಿಕ ವರದಿಯ ಆಧಾರದಲ್ಲಿ ಸಫಾರಿ ಪುನಾರಂಭ ಮಾಡಲಾಗಿದೆ ಎಂದು ವಿವರಿಸಿದರು.

1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿಗಳಿದ್ದವು. 3 ವರ್ಷಗಳ ಹಿಂದೆ ಗಣತಿ ನಡೆದಾಗ ಅಲ್ಲಿ 150 ಹುಲಿ ಇದ್ದವು. ಈಗ ಹುಲಿಗಳ ಸಂಖ್ಯೆ 175ಕ್ಕೇ ಏರಿದೆ. ಕಾಡಿನ ಧಾರಣಾ ಸಾಮರ್ಥ್ಯ ತಿಳಿಯಲು ತಜ್ಞರ ಸಮಿತಿಯಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಕಾಡು ಹೆಚ್ಚುತ್ತಿಲ್ಲ. ಬದಲಾಗಿ ಕ್ಷೀಣಿಸುತ್ತಿದೆ. ಸಫಾರಿ ಪುನಾರಂಭ ಮಾಡಿದ ಬಳಿಕ ಪ್ರತಿಷ್ಠಾನಕ್ಕೆ ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದಲ್ಲಿ ಜನಸಂಪರ್ಕ ಸಭೆ ಮಾಡಲು, ಶಿಕ್ಷಣ, ಮೂಲಸೌಕರ್ಯ ಹೆಚ್ಚಳಕ್ಕೆ, ಉದ್ಯೋಗ ಸೃಷ್ಟಿಗೆ ಬಳಸಲು ಸೂಚಿಸಲಾಗಿದೆ ಎಂದು ಸದನಕ್ಕೆ ಈಶ್ವರ ಖಂಡ್ರೆ ತಿಳಿಸಿದರು.

RELATED ARTICLES
- Advertisment -
Google search engine

Most Popular