ಬೆಳ್ತಂಗಡಿ : ಜೀನು ಕೃಷಿ ಅಧ್ಯಯನ ಪ್ರವಾಸದ ನೆಪದಲ್ಲಿ ಶಾಲಾ ಮಕ್ಕಳನ್ನು ಟ್ರಕ್ ನಲ್ಲಿ ಕರೆದೊಯ್ದ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಬಳೆಂಜದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ.
ಶಾಲಾ ಮಕ್ಕಳನ್ನು ಪಿಕಪ್ ಮತ್ತು ಟ್ರಕ್ನಲ್ಲಿ ಕರೆದೊಯ್ಯುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಆ ಬಳಿಕ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದರು.
ಇನ್ನೂ ಕುರಿತು ಮಾತನಾಡಿದ ಬೆಳ್ತಂಗಡಿ ಬಿಇಒ ತಾರಕೇಸರಿ, ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್, ಫೆ.11ರಂದು 1.5 ಕಿಲೋಮೀಟರ್ ದೂರದಲ್ಲಿರುವ ಫಾರ್ಮ್ ಗೆ ಜೇನು ಕೃಷಿ ಅಧ್ಯಯನಕ್ಕೆಂದು ಪಿಕಟ್ ಮತ್ತು ಟಿಪ್ಪರ್ ನಲ್ಲಿ 70 ಮಕ್ಕಳನ್ನು ಮಣ್ಣು ತುಂಬಿಸಿದ ರೀತಿಯಲ್ಲಿ ಕರೆದೊಯ್ದಿದ್ದು, ಬಳಿಕ ಅದೇ ವಾಹನಗಳಲ್ಲಿ ಮಕ್ಕಳನ್ನು ಕರೆತರಲಾಗಿತ್ತು ಎಂದು ತಿಳಿಸಿದರು.
ಮುಂದುವರೆದು, ಶಾಲೆಯ ಕೆಲವು ಹಳೆ ವಿದ್ಯಾರ್ಥಿಗಳು ಮಕ್ಕಳನ್ನು ಉಚಿತವಾಗಿ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲು ಮುಂದೆ ಬಂದಿದ್ದರು. ಪೋಷಕರು ಕೂಡಾ ಅದಕ್ಕೆ ಒಪ್ಪಿದ್ದರು ಎಂದು ಮುಖ್ಯೋಪಾಧ್ಯಾಯರು ಹೇಳಿರುವುದಾಗಿ ಬಿಇಒ ಹೇಳಿದರು.
ಇನ್ನೂ ಈ ವಿಡಿಯೋ ಎಲ್ಲೆಡೆ ವೈರಲ್ ಆದ ಬಳಿಕ, ಟ್ರಕ್ ಮತ್ತು ಪಿಕಪ್ ವಾಹನಗಳಲ್ಲಿ ಮಕ್ಕಳನ್ನು ಸಾಗಿಸುವ ಮೂಲಕ ಮಕ್ಕಳ ಸುರಕ್ಷತೆಗೆ ಅಪಾಯ ತಂದೊಡ್ಡಿದ್ದಾರೆ ಎಂದು ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಈ ಕುರಿತು ಬೆಳ್ತಂಗಡಿ ಬಿಇಒಗೆ ಮೌಖಿಕ ದೂರು ನೀಡಿದ್ದು, ಡಿಡಿಪಿಐಗೆ ವರದಿ ಸಲ್ಲಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ ನಿಯಮಗಳು, 2021 ಮತ್ತು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಅಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಕ್ಷಿಣ ಕನ್ನಡ ಜಿ.ಎಸ್.ಶಶಿಧರ್ ಅವರು ಮುಖ್ಯೋಪಾಧ್ಯಾಯರ ವಿರುದ್ಧ ಅಮಾನತು ಆದೇಶ ಹೊರಡಿಸಿದ್ದಾರೆ.



