ಬೆಂಗಳೂರು: ರಾಜ್ಯದ ಹಣಕಾಸು ಪರಿಸ್ಥಿತಿ ಗಂಭೀರವಾಗಿರುವ ಸಂದರ್ಭದಲ್ಲೇ ನೆರೆ ರಾಜ್ಯಕ್ಕೆ ಹೆಚ್ಚುವರಿ ನೆರವು ನೀಡಿರುವ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಅವರು, ಸಂಸದೆ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ವಯನಾಡು ಕ್ಷೇತ್ರಕ್ಕೆ 10 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿರುವುದನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.
ರಾಜ್ಯದ ಒಳಗಿನ ಸಮಸ್ಯೆಗಳು ಪರಿಹಾರವಾಗದಿರುವಾಗ ಹೊರರಾಜ್ಯಕ್ಕೆ ನೆರವು ನೀಡಿರುವುದು ಸರಿಯಲ್ಲ ಎಂದು ಅವರು ಆರೋಪಿಸಿದರು. ಸರ್ಕಾರಿ ನೌಕರರ ಸಂಬಳ, ಗುತ್ತಿಗೆದಾರರ ಬಾಕಿ, ಶಾಲಾ ಸೌಲಭ್ಯಗಳು,ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ, ಸ್ಕ್ಯಾನಿಂಗ್ ಸೇವೆ ಒದಗಿಸುವ ಕಂಪನಿಗಳ ಬಿಲ್ ಪಾವತಿಗೆ ಹಣವಿಲ್ಲ. ಶಾಸಕರಿಗೆ ಅನುದಾನವಿಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ.
2025-26ನೇ ಸಾಲಿನ ಪೂರಕ ಅಂದಾಜಿನಲ್ಲಿ ವಯನಾಡಿನ ಭೂಕುಸಿತ ಪೀಡಿತ ಕುಟುಂಬಗಳ ಪುನರ್ವಸತಿಗೆ ಹೆಚ್ಚುವರಿ ಅನುದಾನ ನೀಡಿರುವ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ. ರಾಜ್ಯದ ಜನರ ಅಗತ್ಯಗಳಿಗೆ ಆದ್ಯತೆ ನೀಡಬೇಕು ಎಂಬುದು ಅವರ ಆಕ್ಷೇಪವಾಗಿದೆ.



