ರಾಮನಗರ: ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದವರು ಶಂಕರಾಚಾರ್ಯರು ಎಂದು ಶೇಷಾದ್ರಿ ಅಯ್ಯರ್ ಅವರು ತಿಳಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಶಂಕರ ಸೇವಾ ಟ್ರಸ್ಟ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಚೀನ ಭಾರತೀಯ ಉಪನಿಷತ್ತುಗಳ ತತ್ವಗಳು ಮತ್ತು ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಶ್ರೀ ಆದಿ ಶಂಕರಾಚಾರ್ಯರು ಶ್ರಮಿಸಿದರು. ಅದ್ವೈತ ಸಿದ್ದಾಂತ ಸ್ಥಾಪಿಸಿದರು. ಶತಮಾನಗಳಿಂದ ಪಂಡಿತರು ಧರ್ಮಗ್ರಂಥಗಳ ಹೆಸರಿನಲ್ಲಿ ಜನರಿಗೆ ನೀಡುತ್ತಿದ್ದ ತಪ್ಪು ಶಿಕ್ಷಣದ ಬದಲಾಗಿ ಸರಿಯಾದ ಶಿಕ್ಷಣ ನೀಡುವ ಕೆಲಸವನ್ನು ಆದಿ ಶಂಕರಾಚಾರ್ಯರು ಮಾಡಿದರು ಎಂದರು.
ಅವರು ಚಿಕ್ಕ ವಯಸ್ಸಿನಲ್ಲಿಯೇ ವೇದಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ಸನ್ಯಾಸಿಯಾದರು. ಅವರು ಕೇವಲ ೩೨ ನೇ ವಯಸ್ಸಿನಲ್ಲಿ ತಮ್ಮ ದೇಹವನ್ನು ತ್ಯಜಿಸಿದರು ಎಂದರು. ಶ್ರೀ ಆದಿ ಗುರು ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪ್ರಚಾರ ಮಾಡಲು ಉತ್ತರದಲ್ಲಿ ಬದರಿಕಾಶ್ರಮದ ಜ್ಯೋತಿರ್ಮಠ, ಪಶ್ಚಿಮದಲ್ಲಿ ದ್ವಾರಕಾದಲ್ಲಿರುವ ಶಾರದಾ ಮಠ, ಪೂರ್ವದಲ್ಲಿ ಜಗನ್ನಾಥಪುರಿಯಲ್ಲಿರುವ ಗೋವರ್ಧನ ಮಠ ಮತ್ತು ದಕ್ಷಿಣದಲ್ಲಿ ಶೃಂಗೇರಿ ಮಠಗಳನ್ನು ೪ ದಿಕ್ಕುಗಳಲ್ಲಿ ಸ್ಥಾಪಿಸಿದರು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಶ್ರೀ ಶಂಕರ ಸೇವಾ ಟ್ರಸ್ಟಿನ ಕೆ. ಸತ್ಯ ನಾರಾಯಣ, ಜೆ. ಶೇಷಗಿರಿ ರಾವ್, ಗಣೇಶ್ ರಾವ್, ಜಯರಾಂ, ಕೇಶವ ಮೂರ್ತಿ ಹಾಗೂ ಇತರರು ಉಪ್ಥಿತರಿದ್ದರು.