ತಾಳಮದ್ದಳೆಯಲ್ಲಿ ಸ್ತ್ರೀ ಪಾತ್ರಗಳನ್ನು ಗೆಲ್ಲಿಸಬೇಕೆಂದು ಸದಾ ಬಯಸಿದೆ. ಅಂಥಹ ಪಾತ್ರಗಳ ಬಗ್ಗೆ ಅಧ್ಯಯನ ಮಾಡಿ, ಅವುಗಳಿಗೆ ಗೌರವ ಸಿಗುವಂತೆ ಮಾಡಲು ಪ್ರಯತ್ನಿಸಿದೆ. ಶೇಣಿ, ಪೆರ್ಲ, ಸಾಮಗದ್ವಯರು ಸೇರಿದಂತೆ ಹಿರಿಯರು ನನ್ನ ಪ್ರಯತ್ನವನ್ನು ಮೆಚ್ಚಿದರು. ಅದು ನನ್ನ ಪುಣ್ಯ ಎಂದು ಹಿರಿಯ ಅರ್ಥದಾರಿ, ಪ್ರವಚನಕಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಹೇಳಿದರು.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ಮಂಗಳೂರು, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಶೇಣಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ-2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಶೇಣಿ ನನ್ನ ಪರೋಕ್ಷ ಗುರುಗಳು. ಅವರ ಜತೆ ವೇದಿಕೆಯಲ್ಲಿ ಒಡನಾಟ ನನ್ನ ಅಧ್ಯಯನಶೀಲತೆ ಹೆಚ್ಚಿಸಿತು. ನನ್ನ ಜನ್ಮದಿನದಂದೇ ಶೇಣಿ ಪ್ರಶಸ್ತಿ ಲಭಿಸಿದೆ. ಹಿಂದೆ ಜನ್ಮದಿನದಂದೇ ಪೆರ್ಲ ಪ್ರಶಸ್ತಿಯೂ ಲಭಿಸಿತ್ತು. ಇದು ನನ್ನ ಪುಣ್ಯ ಎಂದು ಅವರು ಹೇಳಿದರು.
ಟ್ರಸ್ಟ್ ಅಧ್ಯಕ್ಷ, ಹರಿದಾಸ ಕೆ.ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಶುಭಾಶಂಸನೆ ಮಾಡಿದರು. ಟ್ರಸ್ಟ್ ಉಪಾಧ್ಯಕ್ಷ ಜಿ.ಕೆ.ಭಟ್ ಸೇರಾಜೆ ಶೇಣಿ ಸಂಸ್ಮರಣೆ ಹಾಗೂ ಮೂಡಂಬೈಲು ಅಭಿನಂದನಾ ನುಡಿಗಳನ್ನಾಡಿದರು. ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್, ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಸಿ.ಎ.ಶ್ಯಾಮ ಭಟ್, ಉದ್ಯಮಿ ಶಿವಪ್ರಸಾದ್ ಪ್ರಭು ಉಪಸ್ಥಿತರಿದ್ದರು.
ಶೇಣಿ ಟ್ರಸ್ಟ್ನ ಹಿರಿಯ ಸದಸ್ಯ ಬೆಟ್ಟಂಪಾಡಿ ಸುಂದರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಶೇಣಿ ಬಾಲಮುರಳಿಕೃಷ್ಣ ವಂದಿಸಿದರು. ಟ್ರಸ್ಟಿನ ಕಾನೂನು ಸಲಹೆಗಾರ ಎಂ.ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಹರಿದಾಸ ಮಂಜುಳಾ ಇರಾ ಮತ್ತು ಬಳಗದಿಂದ ಹರಿಕಥೆ ಜರುಗಿತು.



