ಬೆಂಗಳೂರು: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಇರುವುದು ಪತ್ತೆಯಾಗಿದ್ದು, ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರ ತೆಗೆದಿದ್ದಾರೆ. ಏಪ್ರಿಲ್ ೨೫ ರಂದು ಶಸ್ತ್ರಚಿಕಿತ್ಸೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ ಎಂದು ವರದಿಯಾಗಿದೆ. ಮಾರ್ಚ್ ೨೮ ರಂದು ವಿಚಾರಣಾಧೀನ ಕೈದಿ ೨೬ ವರ್ಷದ ಪರಶುರಾಮ್ ಹೊಟ್ಟೆ ನೋವಿದೆ ಎಂದು ದೂರು ನೀಡಿದ್ದರು. ಹೀಗಾಗಿ ಜೈಲು ಆವರಣದಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ನಂತರ ನೋವು ತಡೆಯಲಾಗುತ್ತಿಲ್ಲ ಎಂದು ಹೇಳಿದ ಕಾರಣ, ಅದೇ ರಾತ್ರಿ ಅವರನ್ನು ಮೆಕ್ಗಾನ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಕೆಲ ಸಮಯದ ಹಿಂದೆ ಕಲ್ಲು ನುಂಗಿದ್ದೆ ಎಂದು ಪರಶುರಾಮ್ ಅಲ್ಲಿನ ವೈದ್ಯರಿಗೆ ತಿಳಿಸಿದ್ದರು. ಅದರಂತೆ, ವೈದ್ಯರು ಬಾಹ್ಯ ವಸ್ತು ಹೊಟ್ಟೆ ಸೇರಿರುವುದರಿಂದ ಹೊಟ್ಟೆ ನೋವಿರಬಹುದು ಎಂದು ಔಷಧ ನೀಡಿದ್ದರು.
ಪರಶುರಾಮ್ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಹೀಗಾಗಿ ಪರಶುರಾಮ್ಗೆ ಕೆಲವು ವಿಶೇಷ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಜೈಲು ಅಧಿಕಾರಿಗಳಿಗೆ ಸೂಚಿಸಿದರು. ಏಪ್ರಿಲ್ ೬ ರಂದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಏಪ್ರಿಲ್ ೨೫ ರಂದು ಶಸ್ತ್ರಚಿಕಿತ್ಸೆ ಮೂಲಕ ಪರಶುರಾಮ್ ಹೊಟ್ಟೆಯಿಂದ ಮೊಬೈಲ್ ಫೋನ್ ಹೊರ ತೆಗೆಯಲಾಯಿತು.
ಜೈಲಿನಲ್ಲಿದ್ದಾಗ ಮೊಬೈಲ್ ಫೋನ್ ಹೊಂದಿದ್ದಕ್ಕಾಗಿ ಪರಶುರಾಮ್ ವಿರುದ್ಧ ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಕಾಯ್ದೆ ೨೦೨೨ ರ ಸೆಕ್ಷನ್ ೪೨ ರ ಅಡಿಯಲ್ಲಿ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.