ಬೆಂಗಳೂರು : ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗುವ ಬಯಕೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರು. ಸದ್ಯ ಆ ಆಸೆ ಈಡೇರಲಿದೆ. ಹೌದು…ಸಿದ್ದರಾಮಯ್ಯ ಅವರು ನಾಳೆ ಅಂದರೆ ಜನವರಿ 6ರಂದು ರಾಜ್ಯದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎನ್ನುವ ದಾಖಲೆ ಬರೆಯಲಿದ್ದಾರೆ. ಇದರೊಂದಿಗೆ ದಿವಂಗತ ದೇವರಾಜ ಅರಸು ಅವರನ್ನು ಹಿಂದಿಕ್ಕಿ ಹೊಸ ದಾಖಲೆ ಬರೆಯಲಿದ್ದಾರೆ. ಈ ಸಂಭ್ರಮವನ್ನು ವಿಭಿನ್ನವಾಗಿ ”ನಾಟಿ ಕೋಳಿ ಔತಣಕೂಟ” ಆಯೋಜಿಸಿ ಸಂಭ್ರಮಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಜನವರಿ 6ರಂದು ನೆಲಮಂಗಲದ ಭಕ್ತನ ಪಾಳ್ಯದಲ್ಲಿ ನಾಟಿ ಕೋಳಿ ಔತಣಕೂಟ ನಡೆಯಲಿದ್ದು, ನಾಟಿಕೋಳಿ ಸಾಂಬಾರ್, ಮುದ್ದೆ, ಕಾಳು ಗೊಜ್ಜು, ರೈಸ್, ಪಲಾವ್ ಮತ್ತು ಸಿಹಿತಿಂಡಿ ನೀಡಲು ತೀರ್ಮಾನಿಸಲಾಗಿದೆ. ಐದರಿಂದ ಹತ್ತು ಸಾವಿರ ಜನರು ಸೇರುವ ನಿರೀಕ್ಷೆ ಇರಿಸಲಾಗಿದೆ.



