ಬೆಂಗಳೂರು : ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸ್ನೇಹಮಯಿ ಕೃಷ್ಣ ಬಂಧನ ಇದು ದುರಾಡಳಿತದ ಪರಮಾವಧಿ. ಕರ್ನಾಟಕದಲ್ಲಿ ಎಮರ್ಜೆನ್ಸಿ ಈ ಸರ್ಕಾರ ತಂದಿದೆ ಅಂತ ಕಿಡಿಕಾರಿದರು.
ಮುಡಾ ಕೇಸ್ ವಿರುದ್ದ ಸ್ನೇಹಮಯಿ ಕೃಷ್ಣ ಹೋರಾಟ ಮಾಡಿದ್ರು. ನಾವು ಕೂಡಾ ಪಾದಯಾತ್ರೆ ಮಾಡಿದ್ವಿ. ಇದನ್ನ ಇವರಿಗೆ ಸಹಿಸೋಕೆ ಆಗಿಲ್ಲ. ಹೀಗಾಗಿ ಕೋರ್ಟ್ ನಿಂದಲೇ ನ್ಯಾಯಕ್ಕಾಗಿ ಹೋರಾಟ ಮಾಡೋರನ್ನ ಬಂಧನ ಮಾಡಿದ್ದಾರೆ. ಗಾಂಧಿ ಆದರ್ಶದ ವಿರುದ್ಧ ಈ ಸರ್ಕಾರ ನಡೆದುಕೊಳ್ತಿದೆ. ನ್ಯಾಯದ ಕತ್ತು ಹಿಸಿಕೋ ಕೆಲಸ ಮಾಡ್ತಿದೆ. ಈ ಸರ್ಕಾರ ಅಂತ ಕಿಡಿಕಾರಿದರು.

ಸ್ನೇಹಮಯಿ ಕೃಷ್ಣ ಬಂಧನ ಯಾಕೆ?
ಮುಡಾದ ಮಾಜಿ ಆಯುಕ್ತ ಡಿ.ಬಿ ನಟೇಶ್ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸೈಬರ್ ಪೊಲೀಸರು ಮುಡಾ ಪ್ರಕರಣದ ರುವಾರಿಯೂ ಆಗಿರುವ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನ ಬಂಧಿಸಿದ್ದಾರೆ.
ನಟೇಶ್ ನೀಡಿದ ದೂರು ಏನು?
ಇತ್ತೀಚೆಗಷ್ಟೇ ಸ್ನೇಹಮಯಿ ಕೃಷ್ಣ ನಟೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಒಂದೂವರೇ ಕೋಟಿ ಹಣ ನೀಡಿ, ನಟೇಶ್ ಮುಂಬಡ್ತಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಮುಡಾ ಮಾಜಿ ಆಯುಕ್ತ ನಟೇಶ್ ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದರು.
ದೂರಿನ ಅನ್ವಯ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಸ್ನೇಹಮಯಿ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರು ಸೈಬರ್ ಪೊಲೀಸರು ಇಂದು ಬಂಧಿಸಿದ್ದಾರೆ.



