ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ವೈಜ್ಞಾನಿಕವಾಗಿದ್ದು, ಪ್ರಸ್ತುತ ಲಭ್ಯವಿರುವ ಅಂಕಿ-ಅಂಶಗಳನ್ನು ಸಮೀಕರಿಸಿಕೊಂಡು ವರದಿ ಜಾರಿಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ ಕಾಂತರಾಜು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಯನ್ನು ಇನ್ನೂ ಯಾರೂ ನೋಡಿಲ್ಲ. ವರದಿಯಲ್ಲಿ ಏನಿದೆ ಎಂಬ ಅಂಕಿ ಅಂಶಗಳು ಬಿಡುಗಡೆಯಾಗಿಲ್ಲ. ಬಿಡುಗಡೆಗೂ ಮುನ್ನ ಅದು ಅವೈಜ್ಞಾನಿಕ, ಹಳೆಯದು ಎಂಬೆಲ್ಲಾ ಅಭಿಪ್ರಾಯಗಳು ಅಪ್ರಸ್ತುತ ಎಂದರು.
ಸಮೀಕ್ಷೆ ನಡೆದು ೮ ವರ್ಷಗಳಾಗಿದ್ದರೂ ಪ್ರಸ್ತುತ ಜಾರಿಗೊಳಿಸುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ೧೦ ವರ್ಷಗಳಷ್ಟು ಹಿಂದಿನ ವರದಿಯನ್ನು ಜಾರಿ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ನೇತೃತ್ವದಲ್ಲಿ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಯಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ. ತಳ ಹಾಗೂ ಅವಕಾಶ ವಂಚಿತ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂಬ ಉದ್ದೇಶದಿಂದ ೨೦೧೩ರಲ್ಲಿ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ನಡೆಸಲು ನಿರ್ಧರಿಸಿತ್ತು. ಅದರಂತೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ. ೫೫ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಲಾಗಿದೆ. ಇದನ್ನು ಜಾತಿ ಜನಗಣತಿ ಎಂದು ಬಿಂಬಿಸುವುದು ಸರಿಯಲ್ಲ ಎಂದರು.
ಜಾತಿ ಮಾಹಿತಿ ಕಲೆಹಾಕುವ ಒಂದು ಕಾಲಂ ಇತ್ತು ಎಂಬುದು ಸತ್ಯ. ಆದರೆ, ಅದನ್ನು ಮೀರಿ ಬಹಳಷ್ಟು ಮಾಹಿತಿಗಳನ್ನು ಕ್ರೋಢೀಕರಿಸಲಾಗಿದೆ. ಮನೆ, ನಿವೇಶನ ಹೊಂದಿರುವವರು, ರೇಷನ್ ಕಾರ್ಡ್, ಬ್ಯಾಂಕ್ ಖಾತೆ, ಉದ್ಯೋಗ, ಆರ್ಥಿಕ ಸ್ಥಿತಿ-ಗತಿ ಸೇರಿದಂತೆ ಹಲವು ವಿವರಗಳನ್ನು ಸಂಗ್ರಹಿಸಲಾಗಿದೆ. ಸಂವಿಧಾನದ ಪ್ರಕಾರ ಮೀಸಲಾತಿ ನೀಡಬೇಕಾದರೆ ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡಗಳು ಅರ್ಹವಾಗಿವೆ. ಜಾತಿ ಆಧಾರಿತವಾಗಿ ಸಮೀಕ್ಷೆ ನಡೆದು ಅದನ್ನು ಪರಿಗಣಿಸಿ ಮೀಸಲಾತಿ ನೀಡಲಾಗುವುದಿಲ್ಲ ಮತ್ತು ಜಾತಿ ಆಧಾರಿತ ಸಮೀಕ್ಷೆಗಳು ಸಂವಿಧಾನ ಬಾಹಿರವಾಗುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಅರ್ಥಪೂರ್ಣ ಹಾಗೂ ಸಂವಿಧಾನತ್ಮಕವಾಗಿರಬೇಕು ಎಂಬ ಕಾರಣಕ್ಕಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಕಲೆಹಾಕಲಾಯಿತು ಎಂದು ಹೇಳಿದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲೇ ವರದಿ ನೀಡದಿರುವ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಆದರೆ, ಆಗಿನ್ನೂ ವರದಿ ಸಂಪೂರ್ಣವಾಗಿ ತಯಾರಾಗಿರಲಿಲ್ಲ. ೨೦೧೯ರಲ್ಲಿ ವರದಿ ಸಿದ್ಧಗೊಂಡಿತ್ತು. ಅದನ್ನು ಸರ್ಕಾರಕ್ಕೆ ಸಲ್ಲಿಸಲು ನಾವು ಪ್ರಯತ್ನಿಸಿದೆವು. ಆದರೆ, ಅವಕಾಶ ಸಿಗಲಿಲ್ಲ. ನನ್ನ ಅವಧಿ ಮುಗಿದ್ದಿದರಿಂದ ಆಯೋಗದ ಸದಸ್ಯ ಕಾರ್ಯದರ್ಶಿಯವರಿಗೆ ವರದಿ ನೀಡಿ ಸರ್ಕಾರಕ್ಕೆ ತಲುಪಿಸಲು ಸಲಹೆ ನೀಡಿ ಬಂದಿದ್ದೆ ಎಂದು ಸ್ಪಷ್ಟನೆ ನೀಡಿದರು.
ಸದಸ್ಯ ಕಾರ್ಯದರ್ಶಿ ಐಎಎಸ್ ಅಧಿಕಾರಿಯಾಗಿದ್ದು, ಆಯೋಗದ ಮುಖ್ಯಸ್ಥರಾಗಿದ್ದರು. ಸಮೀಕ್ಷೆಯ ಕಾರ್ಯತಂಡದ ಸದಸ್ಯರೂ ಆಗಿದ್ದರು. ಅಂತಿಮ ವರದಿಗೆ ಸದಸ್ಯ ಕಾರ್ಯದರ್ಶಿ ಅವರ ಸಹಿ ಇಲ್ಲ ಎಂಬುದು ಸತ್ಯ. ಆದರೆ, ಆಯೋಗದ ಕಾರ್ಯಕಾರಿ ಮಂಡಳಿ ಅಂತಿಮಗೊಂಡಿರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂಬ ನಿರ್ಣಯ ಕೈಗೊಂಡಿತ್ತು. ಅದಕ್ಕೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿದ್ದರು ಎಂದು ಹೇಳಿದರು. ೧೯೮೦ರಲ್ಲಿ ನೀಡಲಾಗಿದ್ದ ಮಂಡಲ್ ಆಯೋಗದ ವರದಿಯನ್ನು ೧೯೯೩ರಲ್ಲಿ ಜಾರಿಗೊಳಿಸಲಾಗಿದೆ. ೨೦೧೫ರಲ್ಲಿ ಸಿದ್ಧಪಡಿಸಿದ್ದ ಸಮೀಕ್ಷಾ ವರದಿಯ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಪ್ರಸ್ತುತ ದಿನ ಮಾನದ ಅಂಕಿ-ಅಂಶಗಳನ್ನು ಪರಿಗಣಿಸಿ ಜಾರಿ ಮಾಡಬಹುದು. ಈ ರೀತಿಯ ಸಮೀಕರಣಕ್ಕೆ ತಜ್ಞರುಗಳಿದ್ದಾರೆ ಎಂದು ಹೇಳಿದರು.
ಕರ್ನಾಟಕ ದೇಶದಲ್ಲೇ ಪ್ರಥಮ ಬಾರಿಗೆ ಸಮೀಕ್ಷೆಗೆ ಕೈ ಹಾಕಿತು. ಬಿಹಾರದಲ್ಲಿ ಈ ರೀತಿಯ ಪ್ರಯತ್ನಗಳಾದ ಹಲವಾರು ಬಾರಿ ಆಕ್ಷೇಪಗಳು, ಅಡೆತಡೆಗಳು ಎದುರಾಗುತ್ತವೆ. ನ್ಯಾಯಾಲಯಗಳಲ್ಲಿ ತಗಾದೆ ತೆಗೆಯಲಾಗಿತ್ತು. ನ್ಯಾಯಾಲಯ ತಡೆಯಾಜ್ಞೆ ನೀಡಲಿಲ್ಲ. ಅಂತಿಮವಾಗಿ ವರದಿ ಸಿದ್ಧಗೊಂಡು ಜಾರಿಯಾಗಿದೆ ಎಂದು ಹೇಳಿದರು.