ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ತೀವ್ರ ದುರಂತ ಸಂಭವಿಸಿದ್ದು, ಜಾತಿ ನಿಂದನೆ ಕೇಸಿಗೆ ಹೆದರಿದ ಮಗ ಆತ್ಮಹತ್ಯೆ ಮಾಡಿಕೊಂಡಾಗ, ಅದೇ ಸುದ್ದಿ ಕೇಳಿದ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಡಗೇರ ಪಟ್ಟಣದ ಮೆಹಬೂಬ್ (22) ಬುಧವಾರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದು ತಂದೆ ಸೈಯದ್ ಅಲಿ (50) ಶಾಕ್ಗೆ ಒಳಗಾಗಿ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.
ವಿಷಯ ಏನೆಂದರೆ, ತಮ್ಮ ಜಮೀನಿಗೆ ಹೋಗುವ ಮಾರ್ಗವಾಗಿ ಬೇರೆಯವರ ಜಮೀನಿನಲ್ಲಿ ನಡೆದುಕೊಂಡ ವಿಚಾರವಾಗಿ ದಲಿತ ಕುಟುಂಬದೊಂದಿಗೆ ಜಗಳ ಉಂಟಾಗಿ, ಬಳಿಕ ಹಿರಿಯರು ಬಗೆಹರಿಸಿ ನ್ಯಾಯ ಮಾಡಿದ್ದಾರೆ. ಆದರೆ ಬೇರೆಯ ಊರಿನ ದಲಿತ ಮುಖಂಡ ಜಾತಿ ನಿಂದನೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದರಿಂದ ಮೆಹಬೂಬ್ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಂದೆ ಸೈಯದ್ ಅಲಿ ಅವರನ್ನು ತಕ್ಷಣ ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಪೊಲೀಸ್ ತನಿಖೆ ಮುಂದುವರಿದಿದೆ.