ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಇಂದು ಮೋದಿಗೆ ಬರುವ ದುಷ್ಟ ಶಕ್ತಿಗಳ ನಿವಾರಣೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಶಕ್ತಿ ದೇವತೆ ಕಾಳಿಕಾಂಬೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೋದಿ ಅವರ ಆರೋಗ್ಯ, ಆಯಸ್ಸು ವೃದ್ಧಿಗೆ ಪ್ರಾರ್ಥಿಸಿದರು. ಕಾಳಿಕಾಂಬೆ ದೇಗುಲದಲ್ಲಿ ಸಂಪ್ರದಾಯದಂತೆ ತಡೆ ಹೊಡೆಸಿ ದುಷ್ಟ ಶಕ್ತಿಗಳು ದೂರವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಎಂಟು ದಿಕ್ಕುಗಳಿಗೆ ಒಂದೊಂದು, ಪ್ರಧಾನಿಗೆ ಒಂದು ಸೇರಿ ೯ ತಡೆ ಹೊಡೆಸಿ, ಮೋದಿ ಅವರ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳಬಾರದು. ದುಷ್ಟ ಶಕ್ತಿಗಳು ಅವರಿಗೆ ಎದುರಾಗಬಾರದು ಎಂದು ಪೂಜೆ ನೆರವೇರಿಸಿದರು.
ಆ ಅತೃಪ್ತ ಹಾಗೂ ದುಷ್ಟ ಕೂಟದಿಂದ ಮೋದಿಗೆ ಯಾವುದೇ ಅಡಚಣೆಯಾಗಬಾರದು. ಮತ್ತೊಮ್ಮೆ ಮೋದಿ ದೇಶದ ಪ್ರಧಾನಿಯಾಗಬೇಕು. ಅದಕ್ಕಾಗಿ ಎಂಟು ದಿಕ್ಕಿಗೆ ತಡೆ ಹೊಡೆಸಿದ್ದೇವೆ ಎಂದು ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ. ಇನ್ನು ಮಂಡ್ಯದ ಸಂಜಯ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
