ಮೈಸೂರು: ಮಾನಸಿಕವಾಗಿ ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಮುಖ್ಯವಾಗಿದ್ದು ಪ್ರತಿಯೊಬ್ಬ ಮಹಿಳೆಯು ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಿಸಬೇಕೆಂದು ಜಿಲ್ಲಾ ಪಂಚಾಯ್ತಿಯ ಉಪಕಾರ್ಯದರ್ಶಿ ಬಿ.ಎಂ. ಸವಿತಾ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಂಗಳವಾರ ನಡೆದ ಮಹಿಳಾ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಮನೆ ಹಾಗೂ ಕಛೇರಿಗಳಲ್ಲಿ ಎರಡು ಕಡೆಯು ಸಮನಾಗಿ ಕೆಲಸಮಾಡುತ್ತಾರೆ. ಒತ್ತಡಗಳು ಇದ್ದೇ ಇರುತ್ತವೆ. ಒತ್ತಡಗಳನ್ನು ಮರೆಯಲು ಕ್ರೀಡೆ ಅನಿವಾರ್ಯವಾಗಿದ್ದು, ಗಂಡು ಮಕ್ಕಳಂತೆ ನಾವು ಸಹ ಸಾಧನೆ ಮಾಡಬಹುದು ಆದ್ದರಿಂದ ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ನ ಉಪಕಾರ್ಯದರ್ಶಿ ಡಾ. ಕೃಷ್ಣಂರಾಜು ಮಾತನಾಡಿ ಹೆಣ್ಣು ಮಕ್ಕಳು ಸಹ ಆರೋಗ್ಯವಾಗಿರಬೇಕೆಂದು ಈ ಕ್ರೀಡಾ ಕೂಟವನ್ನು ಆಯೋಜನೆ ಮಾಡಲಾಗಿದ್ದು. ಯುರೋಪಿಯನ್ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಸಮಾನತೆ ಇದೆ. ಆದರೆ ಭಾರತದಲ್ಲಿ ಸಮಾನತೆ ಸಿಕ್ಕಿಲ್ಲದಿದ್ದರೂ ಸಹ ಮಹಿಳೆಯರು ಕೂಡ ಪುರುಷರಷ್ಟೇ ಬಲಾಡ್ಯರಾಗಿದ್ದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ಕ್ರೀಡೆ ಮನಸ್ಸಿಗೆ ಉಲ್ಲಾಸವನ್ನು ಕೊಡುತ್ತದೆ. ನಾವು ಹೈಸ್ಕೂಲಿನಲ್ಲಿ ಓದುವಾಗ ಆಟವಾಡುವುದಕ್ಕೆ, ಬಿಡುವುದನ್ನೇ ಕಾಯುತ್ತಿದ್ದೆವು. ಕೆಲಸ ಮಾಡುವ ಮಹಿಳೆಯರೂ ಕೂಡ ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಜೀವನದಲ್ಲಿಯೂ ಸಹ ಪ್ರತಿಯೊಬ್ಬರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿರಿ. ಸೋಲು, ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಎಲ್ಲರಿಗೂ ಶುಭವಾಗಲಿ ಎಂದರು.
ಸಮಾರಂಭದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ನಾಯಕ್ ಸ್ವಾಗತಿಸಿದರು. ಹಿರಿಯ ಭೂ ವಿಜ್ಞಾನಿ ಡಾ. ಪುಷ್ಪವತಿ.ಕೆ.ಎನ್, ಎನ್.ಎಸ್.ಎಸ್. ಅಧಿಕಾರಿ ಡಾ. ಲಕ್ಷ್ಮಿ ಪಲೋಡಿ, ಎಂ. ಲಾವಣ್ಯ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ನಿರೂಪಿಸಿದರು, ಆರ್. ಸುಂದರೇಶ್ ವಂದಿಸಿದರು. ಕ್ರೀಡಾ ಕೂಟದಲ್ಲಿ ಹಾಕಿ ಪೆನಾಲ್ಟಿ ಸೂಟ್, ಶೂಟ್ ಇನ್ ದಿ ಬ್ಯಾಸ್ಕೆಟ್, ಮ್ಯೂಸಿಕಲ್ ಛೇರ್, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಅಥ್ಲೆಟಿಕ್ಸ್, ಗುಂಡು ಎಸೆತ, ಉದ್ದ ಜಿಗಿತ ಆಟಗಳನ್ನು ಆಡಿಸಲಾಯಿತು.
