ಮಂಗಳೂರು: ಮಂಗಳೂರು ನಗರದ ಹೊರವಲಯದಲ್ಲಿರುವ ಕುತ್ತಾರು ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದ ದುರಂತ ಘಟನೆಯೊಂದು ಎಲ್ಲರನ್ನು ಬೆಚ್ಚಿಬೀಳಿಸಿದೆ. ಬಹುಮಹಡಿ ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಬಿದ್ದು 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಳನ್ನು ಹಿಬಾ ಐಮನ್ ಎಂದು ಗುರುತಿಸಲಾಗಿದೆ. ಹಿಬಾ ಮಂಗಳೂರಿನ ವೈದ್ಯ ದಂಪತಿ ಡಾ. ಮುಮ್ತಾಜ್ ಅಹ್ಮದ್ ಮತ್ತು ಅವರ ಪತ್ನಿಯ ಏಕೈಕ ಪುತ್ರಿ. ಕುಟುಂಬವು ಮಂಗಳೂರಿನ ಕುತ್ತಾರಿನಲ್ಲಿರುವ ಬಹುಮಹಡಿ ಅಪಾರ್ಟ್ಮೆಂಟ್ನಲ್ಲಿ 12ನೇ ಮಹಡಿಯಲ್ಲಿ ವಾಸವಿದ್ದರು.
ಪ್ರಾಥಮಿಕ ಮಾಹಿತಿಯಂತೆ, ನಿನ್ನೆ ರಾತ್ರಿ ಹಿಬಾ ಐಮನ್ ಅಪಾರ್ಟ್ಮೆಂಟ್ನ ಟೆರೇಸಿಗೆ ಬಟ್ಟೆ ಒಣಗಿಸಲು ಹೋಗಿದ್ದಳು. ಈ ಸಂದರ್ಭದಲ್ಲಿ ಆಯತಪ್ಪಿ ಅವಳು 12ನೇ ಮಹಡಿಯಿಂದ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಸ್ಥಳೀಯರು ಮತ್ತು ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ, ವೈದ್ಯರು ಅವಳನ್ನು ಮೃತ ಎಂದು ಘೋಷಿಸಿದರು.
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುತ್ತಿದೆ.