ಕೆ.ಆರ್.ಪೇಟೆ : ವಸತಿ ನಿಲಯದಲ್ಲಿದ್ದು, ಕಾಲೇಜು ವ್ಯಾಸಂಗ ವಿದ್ಯಾರ್ಥಿನಿಯೊಬ್ಬಳನ್ನು ಇಬ್ಬರು ಯುವಕರು ಬೈಕಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿದ ಘಟನೆ ಕೆಆರ್ ಪೇಟೆಯಲ್ಲಿ ನಡೆದಿದ್ದು, ಪರಾರಿಯಾಗಿದ್ದ ಆರೋಪಿಗಳನ್ನು ದೂರು ನೀಡಿದ ಒಂದೂವರೆ ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ವಡ್ಡರಹಟ್ಟಿ ಗ್ರಾಮದ ಶಿವಣ್ಣ ಅವರ ಮಗ ವಿ.ಎಸ್.ಜಗದೀಶ್, ಶಂಕರ್ ಅವರ ಮಗ ವಿ.ಎಸ್.ದೀಪು ಬಂಧಿತ ಆರೋಪಿಗಳು.
ಘಟನೆ ವಿವರ: ಮೇ.೨೮ ರಂದು ಸಂಜೆ ಸುಮಾರು ೪ಗಂಟೆ ಸಮಯದಲ್ಲಿ ಪಟ್ಟಣದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಇದ್ದ ವಿದ್ಯಾರ್ಥಿಯೊಬ್ಬಳನ್ನು ಆರೋಪಿಗಳಾದ ಜಗದೀಶ್ ಮತ್ತು ದೀಪು ಮಾತನಾಡಿಸುವ ನೆಪದಲ್ಲಿ ಹಾಸ್ಟೆಲ್ನಿಂದ ಹೊರಗಡೆ ಕರೆದಿದ್ದಾರೆ.
ಈ ವೇಳೆ ಟಿ.ಬಿ.ವೃತ್ತದ ಬಳಿಯ ಮುಖ್ಯ ರಸ್ತೆಗೆ ಬಂದ ವಿದ್ಯಾರ್ಥಿನಿಯನ್ನು ತಮ್ಮ ಬೈಕ್ನಲ್ಲಿ ಬಲವಂತವಾಗಿ ಕೂರಿಸಿಕೊಂಡು ಹೊಸಹೊಳಲು ಸಮೀಪದ ಇಟ್ಟಿಗೆ ಫ್ಯಾಕ್ಟರಿ ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಇಬ್ಬರು ಸೇರಿ ಸಂಜೆ ಸುಮಾರು ೪-೪೫ ಗಂಟೆ ಸಮಯದಲ್ಲಿ ವಿದ್ಯಾರ್ಥಿನಿಯನ್ನು ಬೆದರಿಸಿ ಬೆತ್ತಲೆ ಮಾಡಿ, ಮೊಬೈಲ್ನಿಂದ ಆಕೆಯ ಬೆತ್ತಲೆ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ.
ನಂತರ ಯುವತಿಯನ್ನು ಬೆದರಿಸಿ ಜಗದೀಶ್ ಹಾಗೂ ದೀಪು ಬಲವಂತದಿಂದ ಅತ್ಯಾಚಾರ ಮಾಡಿದ್ದಾರೆ. ಈ ವೇಳೆ ವಿದ್ಯಾರ್ಥಿನಿಗೆ ದೈಹಿಕ ಹಲ್ಲೆಯನ್ನೂ ನಡೆಸಿ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿ ಅತ್ಯಾಚಾರದ ಬಳಿಕ ಯುವತಿಯನ್ನು ಕೆ.ಆರ್.ಪೇಟೆ ಮಹಿಳಾ ಕಾಲೇಜು ಬಳಿ ಬೈಕಿನಿಂದ ಕೆಳಕ್ಕೆ ಇಳಿಸಿ ಹೊರಟು ಹೋದರು ಎಂದು ಸಂತ್ರಸ್ಥ ವಿದ್ಯಾರ್ಥಿನಿ ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ಸರ್ಕಲ್ ಇನ್ಸ್ಪೆಕ್ಟರ್ ಆನಂದೇಗೌಡ ಮತ್ತು ಪಿ.ಎಸ್.ಐ ನವೀನ್ ಕುಮಾರ್ ನೇತೃತ್ವದ ತಂಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಡಾ. ಯತೀಶ್ ಕುಮಾರ್, ಎ.ಎಸ್.ಪಿ ತಿಮ್ಮಯ್ಯ, ಡಿವೈಎಸ್ಪಿ ಡಾ.ಸುಮಿತ್ ಅವರ ಮಾರ್ಗದರ್ಶನದಲ್ಲಿ ದೂರು ದಾಖಲಾದ ಕೇವಲ ಒಂದೂವರೆ ಗಂಟೆಯಲ್ಲಿ ಆರೋಪಿಗಳನ್ನು ನಾಗಮಂಗಲದಲ್ಲಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲು ರಚಿಸಿದ್ದ ತನಿಖಾ ತಂಡದಲ್ಲಿ ರಘು, ಜೀಸನ್, ಅರುಣ್ ಕುಮಾರ್, ವೈರಮುಡಿ, ಜಯವರ್ಧನ್ ಭಾಗವಹಿಸಿದ್ದರು. ಪೋಲೀಸರ ಕ್ಷಿಪ್ರ ಕಾರ್ಯಾಚರಣೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.