ಮಂಗಳೂರು: ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಮಂಗಳೂರು–ಪುತ್ತೂರು ಭಾಗದ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ವಿದ್ಯಾರ್ಥಿನಿ ನೀಡಿದ ದೂರು ಸಂಬಂಧಿ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮೂಲಕ ಪ್ರಕರಣ ಗಂಭೀರ ಹಂತ ತಲುಪಿದ್ದು, ಪೊಲೀಸರು ಮಗುವಿನ ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದಾರೆ.
ಕೃಷ್ಣ, ಯುವತಿಗೆ ಮದುವೆಯಾಗುವುದಾಗಿ ನಂಬಿಕೆ ನೀಡಿದ ಬಳಿಕ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. 2024 ಅಕ್ಟೋಬರ್ 11ರಂದು ತನ್ನ ಮನೆಯಲ್ಲಿದ್ದಾಗ, ಮದುವೆಯ ಭರವಸೆ ನೀಡಿ ಶಾರೀರಿಕ ಸಂಪರ್ಕ ಮಾಡಿಕೊಂಡು, ನಂತರ 2025ರ ಜನವರಿಯಲ್ಲೂ ಮತ್ತೊಮ್ಮೆ ಬಲವಂತವಾಗಿ ಲೈಂಗಿಕವಾಗಿ ಬಳಸಿ ಗರ್ಭಿಣಿಯಾಗಿಸಿದ್ದಾನೆ ಎನ್ನಲಾಗಿದೆ.
ಗರ್ಭಿಣಿಯಾದ ನಂತರ ಕೃಷ್ಣ ಮದುವೆಗೆ ನಿರಾಕರಿಸಿದರೆಂದು ಯುವತಿ ದೂರಿನಲ್ಲಿ ಆರೋಪಿಸಿದ್ದು, ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ BNS ಸೆಕ್ಷನ್ 64(1) ಮತ್ತು 69 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಕೃಷ್ಣ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸದ್ಯ, ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ಈ ಬೆಳವಣಿಗೆ ಪ್ರಕರಣದ ತನಿಖೆಗೆ ಹೊಸ ದಿಕ್ಕು ತಂದುಕೊಟ್ಟಿದೆ. ಡಿಎನ್ಎ ಪರೀಕ್ಷೆ ಮೂಲಕ ಯಾರು ಗರ್ಭಕ್ಕೆ ಕಾರಣ ಎಂಬುದು ಸಾಬೀತುಪಡಿಸಲು ಪೊಲೀಸರು ಮುಂದಾಗಿದ್ದಾರೆ. ತ್ವರಿತ ತನಿಖೆ, ಆರೋಪಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.