Wednesday, March 11, 2026
Google search engine

Homeರಾಜ್ಯಸುದ್ದಿಜಾಲಮಡಿವಾಳ ಜನಾಂಗವನ್ನು ಪ.ಜಾತಿಗೆ ಸೇರಿಸುವ ಬೇಡಿಕೆ: ಧರಣಿಗೆ ಬೆಂಬಲಿಸಿ ಸಭೆ

ಮಡಿವಾಳ ಜನಾಂಗವನ್ನು ಪ.ಜಾತಿಗೆ ಸೇರಿಸುವ ಬೇಡಿಕೆ: ಧರಣಿಗೆ ಬೆಂಬಲಿಸಿ ಸಭೆ

ವರದಿ: ಎಡತೊರೆ ಮಹೇಶ್

ಎಚ್.ಡಿ.ಕೋಟೆ: ಮಡಿವಾಳ ಜನಾಂಗವನ್ನು ಪ.ಜಾತಿ(ಎಸ್.ಸಿ) ಗೆ ಸೇರಿಸುವಂತೆ ಮಾ.16ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಶ್ರೀಬಸವ ಮಾಚಿದೇವ ಮಹಾಸ್ವಾಮಿ ಮತ್ತು ಶ್ರೀ ಮುಕ್ತಾನಂದ ಸ್ವಾಮೀಜಿ ನೇತೃತ್ವದಲ್ಲಿ ಅಹೋರಾತ್ರಿ ಧರಣಿ‌ ಕೈಗೊಂಡಿರುವುದರಿಂದ ಎಚ್‌.ಡಿ.ಕೋಟೆ, ಸರಗೂರು ತಾಲೂಕಿನ ವೀರಮಡಿವಾಳ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿಯಲ್ಲಿ ಭಾಗವಹಿಸುವಂತೆ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಆಹ್ವಾನ ನೀಡಿದ್ದ ಹಿನ್ನೆಲೆ ತಾಲೂಕಿನ ಮಡಿವಾಳ ಸಮಾಜದವರು‌ ಬುಧವಾರ ಮಧ್ಯಾಹ್ನ ಸಭೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ವೀರ ಮಡಿವಾಳ ಸಂಘದ ಅಧ್ಯಕ್ಷ ಎಲೆಹುಂಡಿ ಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮುದಾಯದ ಮುಖಂಡರ ಸಭೆ ಸೇರಿ ಮಹಿಳೆಯರು, ಪುರುಷರು ಎಂಬ ಬೇಧವಿಲ್ಲದೇ ಪ್ರತಿಯೊಬ್ಬರೂ ಧರಣಿಯಲ್ಲಿ ಪಾಲ್ಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು.

ಎಲೆಹುಂಡಿ ಚಂದ್ರಶೆಟ್ಟಿ ಮಾತನಾಡಿ, ದೇಶದ 17 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಲಾಗಿದೆ. ಕರ್ನಾಟಕದಲ್ಲಿ ನಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಶೈಕ್ಷಣಿಕ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಂದುವರೆಯದಂತೆ ಮಾಡಲಾಗಿದೆ. ನಮ್ಮ ಜನಾಂಗ ಹಿಂದುಳಿದಿರುವುದನ್ನು ಅರಿತಿದ್ದ ಮೈಸೂರಿನ ಮಹಾರಾಜರು 1921ರಲ್ಲಿ ದುಂಡುಮೇಜಿನ ಸಭೆ ನಡೆಸಿ ಪ.ಜಾತಿಗೆ ಸೇರಿಸಲು ಆದೇಶ ಮಾಡಿರುವುದೇ ನಮ್ಮ ಜನಾಂಗ ಹಿಂದುಳಿದಿ ರುವಿಕೆಯನ್ನು ತೋರುತ್ತದೆ ಎಂದು ಸ್ಮರಿಸಿದರು.

ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಕೂಗು ಹಲವಾರು ದಶಕಗಳಿಂದ ಕೇಳಿ ಬರುತ್ತಿದೆ. ಆದರೆ, ಈ ಬಗ್ಗೆ ನಮಗೆ ಸಿಗಬೇಕಾದ ಸ್ಥಾನಮಾನವಾಗಲೀ, ನಮ್ಮ ಬೇಡಿಕೆ ಈಡೇರಿಕೆಗೆ ಇಲ್ಲಿಯವರೆಗೂ ಯಾವುದೇ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಅಧ್ಯಕ್ಷ ಕೆಂಪಶೆಟ್ಟಿ ಮಾತನಾಡಿ, ಪ.ಜಾತಿ(ಎಸ್.ಸಿ)ಗೆ ಸೇರಿಸುವಂತೆ ಕರ್ನಾಟಕ ರಾಜ್ಯ ಮಡಿವಾಳರ ಸಂಘವು ಸರ್ಕಾರಕ್ಕೆ ಒತ್ತಡ ಏರಿದ್ದರಿಂದ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪರಿಶಿಷ್ಟರ ಜಾತಿಗೆ ಸೇರಿಸಬೇಕೆ? ಬೇಡವೇ? ಎಂಬುದನ್ನು ಕುಲಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆ ಮಾಡಿ ವರದಿ ನೀಡುವಂತೆ ಮೈಸೂರು ವಿಶ್ವ ವಿದ್ಯಾಲಯದ ಪ್ರೊಫೆಸರ್ ಡಾ. ಅನ್ನಪೂರ್ಣ ನೇತೃತ್ವದ ಸಮಿತಿ ರಚಿಸಿದ್ದರು ಎಂದು ಸ್ಮರಿಸಿದರು.

2009ರಲ್ಲಿ ರಾಜ್ಯದ ಸುಮಾರು 28 ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಈ ಸಮಿತಿಯು ಜನಾಂಗದ ಮುಖಂಡರು, ವೃತ್ತಿಯಲ್ಲಿ ತೊಡಗಿಸಿ ಕೊಂಡವರು, ಮಡಿಕಟ್ಟೆಗಳು, ಕುಲಕಸಬು ಮಾಡುವವುವರು ಇತ್ಯಾದಿ ಅನೇಕರನ್ನು ಭೇಟಿ ಮಾಡಿ, ಕುಲಶಾಸ್ತ್ರ ಅಧ್ಯಯನ ಮಾಡಿ ವರದಿ ನೀಡಿದ್ದಾರೆ ಎಂದರು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿವಾಗಿ ಹಾಗೂ ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಜಾತಿಯನ್ನು ಪ. ಜಾತಿಗೆ ಸೇರಿಸಿ ಎನ್ನುವ ಕುಲಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವರದಿಯನ್ನು 2011ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇಲ್ಲಿಯವರೆಗೆ ಬಂದಿರುವ ಎಲ್ಲಾ ಸರ್ಕಾರಗಳು ಪರಿಗಣಿಸಿ ಪ.ಜಾತಿಗೆ ಮಡಿವಾಳ ಸಮಾಜವನ್ನು ಸೇರ್ಪಡೆ ಮಾಡಿಲ್ಲ. ಕುಲಶಾಸ್ತ್ರ ಅಧ್ಯಯನ ವರದಿ ಕಡತವು ಸಮಾಜ ಕಲ್ಯಾಣ ಇಲಾಖೆಯಲ್ಲಿಯೇ SWD 505 SLP22 ಇಂದಿಗೂ ಕೊಳೆಯುತ್ತಿದೆ. ಈ ವರದಿಯನ್ನು ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶೀಲಿಸಿ ನಮ್ಮ ಜನಾಂಗದ ಬಹು ವರ್ಷಗಳ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವಂತೆ ತಾಲೂಕು ಮಡಿವಾಳ ಸಮಾಜದ ಮುಖಂಡರಾದ ರಂಗಸ್ವಾಮಿ, ಬಸವರಾಜು,ಸ್ವಾಮಿಶೆಟ್ಟಿ, ಮಹದೇವ ಶೆಟ್ಟಿ, ನಾಗಣ್ಣ, ಹೇಮಂತ್ ಕುಮಾರ್, ರಮೇಶ್ ಕೋಟೆ, ವಸಂತ್ ಕುಮಾರ್, ವಿಜಯ ಕುಮಾರ್, ಬಸವರಾಜ ಕೋಟೆ, ತಿಮ್ಮ ಶೆಟ್ಟಿ, ಮಧು, ಸಾಗರ್, ನಂದಕುಮಾರ್, ಸಂತೋಷ್ ಸೇರಿದಂತೆ ಅನೇಕರು ಸರ್ಕಾರಕ್ಕೆ ಮನವಿ‌ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular