ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದಲ್ಲಿ ಮತ್ತೊಂದು ತಲ್ವಾರ್ ದಾಳಿ ಯತ್ನ ಬೆಳಕಿಗೆ ಬಂದಿದೆ. ಕೋಮು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ವಿಶೇಷ ಕಾರ್ಯಪಡೆ ರಚಿಸಿರುವ ಹೊತ್ತಲ್ಲೇ, ಜಿಲ್ಲೆಯಲ್ಲಿ ಮತ್ತೆ ಇಂತಹ ಕೃತ್ಯವು ನಡೆದಿರುವುದು ಆಘಾತಕಾರಿಯಾಗಿದೆ.
ಘಟನೆ ಜೂನ್ 11 ರಂದು ಬೆಳಗಿನ ಜಾವ ಸಜೀಪಮುನ್ನೂರಿನ ನಿವಾಸಿ ಉಮರ್ ಫಾರೂಕ್ ಅವರ ಮೇಲೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಉಮರ್ ಫಾರೂಕ್ ಅವರು ಜೀಪ್ನಲ್ಲಿ ದೇರಳಕಟ್ಟೆ ಕಡೆಗೆ ಹೊರಟಿದ್ದರು. ದೇರಾಜೆ ಬಸ್ ನಿಲ್ದಾಣದ ಬಳಿ ತಲುಪುತ್ತಿದ್ದಂತೆಯೇ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ವಾಹನವನ್ನು ತಡೆದು ತಲ್ವಾರ್ನಿಂದ ದಾಳಿ ಮಾಡಲು ಯತ್ನಿಸಿದರು.
ದಾಳಿಯ ಸಮಯದಲ್ಲಿ ತಲ್ವಾರ್ ವಾಹನದ ಸೈಡ್ ಮಿರರ್ಗೆ ತಾಗಿದ್ದು, ಉಮರ್ ಫಾರೂಕ್ ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ. ಆದರೂ ಈ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ತಕ್ಷಣದಲ್ಲೇ ಉಮರ್ ಫಾರೂಕ್ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಬಿಎನ್ಎಸ್ ಸೆಕ್ಷನ್ಗಳ 109, 324(4) ಮತ್ತು 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೋಷಿಗಳನ್ನು ಗುರುತಿಸುವ ಮತ್ತು ಬಂಧಿಸುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.